ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಕಾರಿಂಜೇಶ್ವರ ಕ್ಷೇತ್ರದ ಪವಿತ್ರ ತೀರ್ಥ ಸ್ನಾನದ ಕೆರೆಯ ಹೂಳೆತ್ತುವ ನೆಪದಲ್ಲಿ ಈ ಕೆರೆಯ ನೀರನ್ನು ಹೆದ್ದಾರಿ ರಸ್ತೆ ಕಾಮಗಾರಿಗೆ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ವ್ಯಕ್ತವಾಗಿ ಈ ಬಗ್ಗೆಮಾಧ್ಯಮಗಳಲ್ಲಿ ಸುದ್ದಿಯಾದ ಬೆನ್ನಲ್ಲೆ ತೀರ್ಥಸ್ನಾನ ಕೆರೆಯಿಂದ ಟ್ಯಾಂಕರ್ ನೀರು ಸಾಗಟ ಸ್ಥಗಿತಗೊಂಡಿದೆ. ಕಾರಿಂಜೇಶ್ವರ ಕ್ಷೇತ್ರದ ಪಾವಿತ್ರ್ಯತೆಯುಳ್ಳ ಗದಾತೀರ್ಥ ಕೆರೆಗೆ ನಾಲ್ಕು ಕಡೆಗಳಲ್ಲಿಯೂ ಪೈಪ್ಗಳನ್ನು ಜೋಡಿಸಿ ಅದರಿಂದ ಟ್ಯಾಂಕರ್ಗಳ ಮೂಲಕ ಪ್ರತಿನಿತ್ಯ ನೀರು ಸಾಗಿಸಿ ಹೆದ್ದಾರಿ ರಸ್ತೆ ಕಾಮಗಾರಿಗೆ ಚೆಲ್ಲಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಕ್ಷೇತ್ರದ ಸ್ಥಳೀಯ ಭಕ್ತರು ಆರೋಪಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸಚಿತ್ರ ವರದಿ ಪ್ರಕಟವಾಗಿತ್ತು. ಇದಾದ ಬೆನ್ನಲ್ಲೇ ಟ್ಯಾಂಕರ್ ಗೆ ನೀರು ತುಂಬಿಸಲು ಗದಾ ತೀರ್ಥಸ್ನಾನ ಕೆರೆಗ ಜೋಡಿಸಲಾಗಿದ್ದ ಪಂಪ್, ಪೈಪ್ಗಳನ್ನು ಅಲ್ಲಿಂದ ತೆರವುಗೊಂಡಿದ್ದು, ಕೆರೆಯಲ್ಲಿ ನೀರುಬತ್ತಿಹೋಗಬಹುದೆಂಬ ಆತಂಕದಲ್ಲಿದ್ದ ಸ್ಥಳೀಯರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೆದ್ದಾರಿ ಕಾಮಗಾರಿಗಾಗಿ ಈಕೆರೆಯಿಂದ ದಿನವೊಂದಕ್ಕೆ 4 ಟ್ಯಾಂಕ್ ರುಗಳಲ್ಲಿ 100 ಕ್ಕೂ ಅಧಿಕ ಟ್ಯಾಂಕರ್ ನಲ್ಲಿ ಅನಧಿಕೃತವಾಗಿ ನೀರು ಸಾಗಿಸಲಾಗುತಿತ್ತು ಎಂದು ಸ್ಥಳೀಯರು ಆರೋಪಿಸಿದ್ದರು. ಕುಡಿಯುವ ನೀರಿಗೆ ಹಾಹಾಕಾರ ವ್ಯಕ್ತವಾಗಿರುವ ಈ ಕಾಲಘಟ್ಟದಲ್ಲಿ ದೇವಳದ ತೀರ್ಥಸ್ನಾನದ ಕೆರೆಯ ನೀರನ್ನು ರಸ್ತೆಗೆ ಚೆಲ್ಲಿ ಪೋಲು ಮಾಡುತ್ತಿರುವುದು ಸ್ಥಳೀಯ ಭಕ್ತ ಜನರಲ್ಲಿ ಆಕ್ರೋಶವನ್ನು ಮೂಡಿಸಿತ್ತು. ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ಯವರೆಗೆ ನಡೆಯುವ ಚತುಷ್ಪತ ಕಾಮಗಾರಿ ಪ್ರಗತಿಯಲ್ಲಿದ್ದು, ಕಾರಿಂಜೇಶ್ವರ ದೇವಳದ ಗದಾ ತೀರ್ಥದ ನೀರನ್ನು ಕಾಮಗಾರಿಯಗುತ್ತಿಗೆ ವಹಿಸಿರುವ ಸಂಸ್ಥೆ ಬಳಸಿ ದುರ್ಬಳಕೆ ಮಾಡುತ್ತಿದೆ ಎಂಬುದು ಸ್ಥಳೀಯ ಭಕ್ತ ಜನರ ಆರೋಪವಾಗಿದ್ದು,ಪರಿಣಾಮ ಈ ಕೆರೆಯಲ್ಲಿ ನೀರು ಬರಿದಾಗುವ ಆತಂಕವನ್ನು ವ್ಯಕ್ತಪಡಿಸಿದ್ದರು.

