ಗುರುಪುರ : ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಶುಕ್ರವಾರ ಗುರುಪುರ ಜಂಗಮ ಮಠ ಹಾಗೂ ಬೈಲು-ಕಾಮದ ಬೈಲುಪೇಟೆ ಮಸೀದಿಗೆ ಭೇಟಿ ನೀಡಿ ಸ್ವಾಮೀಜಿ ಹಾಗೂ ಧರ್ಮಗುರುಗಳ ಆಶೀರ್ವಾದ ಪಡೆದುಕೊಂಡರು.
ಜಂಗಮ ಮಠ ಹಾಗೂ ಮಠದ ಶ್ರೀ ಕಲ್ಲುರ್ಟಿ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ರೈ, ಸ್ಥಳೀಯ ವೃದ್ಧರು, ಮಹಿಳೆಯರ ಸಹಿತ ಮತದಾರ ಬಾಂಧವರಲ್ಲಿ ಸೌಹಾರ್ದ ಮಾತುಕತೆ ನಡೆಸಿದರು.ಬೈಲುಪೇಟೆ ಮಸೀದಿಗೆ ಭೇಟಿ ನೀಡಿ, ಅಲ್ಲಿನ ಪವಿತ್ರ ಗೋರಿಗಳೆದುರು ಪ್ರಾರ್ಥನೆ ಸಲ್ಲಿಸಿ, ಧರ್ಮಗುರುಗಳು ಹಾಗೂ ಸ್ಥಳೀಯರೊಂದಿಗೆ ಆತ್ಮೀಯ ಸಮಾಲೋಚನೆ ನಡೆಸಿದರು.
ಈ ವೇಳೆ ಮಾಧ್ಯಮವರ ಪ್ರಶ್ನೆಗಳಿಗೆ ಉತ್ತರಿಸಿದ ಮಿಥುನ್ ರೈ, “ವಿರೋಧಿಗಳ ಅಪಪ್ರಚಾರಕ್ಕೆ ಭೀತಿಗೊಂಡಿಲ್ಲ. ಅದಕ್ಕೆಲ್ಲ ಮತದಾರರೇ ಉತ್ತರಿಸುತ್ತಾರೆ. ಕ್ಷೇತ್ರದ ಮತದಾರರು ದಡ್ಡರಲ್ಲ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಮತ್ತು ಕಟೀಲಿನಲ್ಲೆಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆಂದು ಹೇಳಲಿ” ಎಂದು ಸವಾಲೆಸೆದರು.
ರೈಯೊಂದಿಗೆ ಮಾಜಿ ಶಾಸಕ ಮೊೈದಿನ್ ಬಾವ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಜಿ ಸುವರ್ಣ, ಉಪಾಧ್ಯಕ್ಷ ದೇವೇಂದ್ರ, ಗುರುಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಮಲ್ಲಿ, ಕಾಂಗ್ರೆಸ್ ವಕ್ತಾರ ಗಣೇಶ್ ಪೂಜಾರಿ, ಹರೀಶ್ ಭಂಡಾರಿ, ಉಂಞ ಗುರುಪುರ, ಬಾಷಾ ಗುರುಪುರ, ಸದಾಶಿವ ಶೆಟ್ಟಿ ಕಲ್ಲಕಲಂಬಿ, ಗೋಕುಲ್, ಉಮೇಶ್ ಭಟ್, ಬಾಷಾ ಮಾಸ್ಟರ್ ಮೊದಲಾದವರಿದ್ದರು.
