ಪೊಳಲಿ:ದೇಶ ಸುಭೀಕ್ಷವಾಗಿರಬೇಕಾದರೆ ವೃತ್ತಿಧರ್ಮ, ರಾಜಧರ್ಮ ಪಾಲನೆಯಾಗಬೇಕು, ಇತಿಹಾಸ-ಪುರಾಣಗಳು ರಾಜಧರ್ಮದ ಪಾಠವನ್ನು ತಿಳಿಸಿದೆ. ರಾಜಕಾರಣಿಗಳು ರಾಜಧರ್ಮವನ್ನು ಪಾಲಿಸಿದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಆದರೆ ಇಂದು ದೇಶಧರ್ಮದ ಬಗ್ಗೆಯೇ ಚರ್ಚೆ ನಡೆಯುತ್ತಿದ್ದು, ನಮ್ಮನ್ನು ರಕ್ಷಿಸುತ್ತಿರುವ ಯೋಧರನ್ನೇ ಸಂಶಯದಿಂದ ನೋಡುತ್ತಿರುವ ಪ್ರವೃತ್ತಿ ಉಂಟಾಗುತ್ತಿರುವುದು ನಿಜಕ್ಕೂ ಅಘಾತಕಾರಿ ಬೆಳವಣಿಗೆ. ದೇಶ ಪ್ರಥಮ ಎಂಬ ಭಾವನೆಯಿಂದ ದೇಶಧರ್ಮ ಪಾಲನೆ ಮಾಡೋಣ ಎಂದು ಕೇಂದ್ರ ರಾಸಾಯನಿಕ-ರಸಗೊಬ್ಬರ ಸಚಿವರಾಗಿರುವ ಡಾ| ಡಿ.ವಿ. ಸದಾನಂದ ಗೌಡ ಹೇಳಿದರು.

ಅವರು ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.9ರಂದು ನಡೆದ ಧಾರ್ಮಿಕ ಸಭೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು
ಸುಂದರ ಕೆತ್ತನೆಗಳಿಂದ ನವೀಕರಣಗೊಂಡಿರುವ ಪೊಳಲಿ ದೇವಸ್ಥಾನದ ವಿನ್ಯಾಸ ನಿಜಕ್ಕೂ ಅಧ್ಬುತ. 20ರಿಂದ 30 ವರ್ಷಗಳಲ್ಲಿ ಆಗಬೇಕಾಗಿದ್ದ ಕೆಲಸ ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಂಡಿರುವುದು ನಿಜಕ್ಕೂ ಅಧ್ಬುತ. ಆದರೆ ಯಾಂತ್ರೀಕರಣದಿಂದಾಗಿ ಇಷ್ಟುವರ್ಷಗಳಲ್ಲಿ ಆಗಬೇಕಾದ ಕೆಲಸವು ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಂಡಿದೆ.
ಇದಕ್ಕೆ ಕಾರಣೀಭೂತರಾದ ಶಿಲ್ಪಿಗಳನ್ನು, ಕಾರ್ಮಿಕರನ್ನು, ಸ್ವಯಂಸೇವಕರನ್ನು, ದಾನಿಗಳನ್ನು ಅಭಿನಂದಿಸುತ್ತಿದ್ದೇನೆ. ಬಡವರಿಗೂ ದಾನ ಮಾಡುವಂಥಾ ಶಕ್ತಿಯನ್ನು ಮಾತೆ ಒದಗಿಸಿರುವುದರಿಂದ ಇಂದು ಧಾರ್ಮಿಕ ಕೇಂದ್ರಗಳು ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಧರ್ಮಸ್ಥಳದ ಧರ್ಮಾದಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದ್ದಾರೆ.
ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ ಮಾತಾಡಿ, ಒಂದು ತಿಂಗಳ ಉತ್ಸವ ಇರುವ ಪೊಳಲಿಯು ಅತ್ಯಂತ ಪುಣ್ಯ ಸ್ಥಳವಾಗಿದ್ದು, ಎಲ್ಲರೂ ಕೃತಜ್ಞತೆಯಿಂದ ದೇವಿಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆನಂದ ಸಿಗಬೇಕಾದರೆ ದೇವರ ಸಾನಿಧ್ಯದಲ್ಲಿರಬೇಕು ಎಂದು ನುಡಿದರು.

ರಾಜ್ಯ ಸಚಿವ ಯು.ಟಿ. ಖಾದರ್ ಮಾತಾಡಿ, ದೇವಸ್ಥಾನದಂಥಾ ಶ್ರದ್ಧಾಕೇಂದ್ರಗಳು ಸರ್ವಧರ್ಮದ ಜನರಿಗೂ ಸಮಾನತೆಯ ಭಾವನೆಯನ್ನು ಕಲಿಸಲಿ ಎಂದು ಹೇಳಿದರು. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ್ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಿದರು. ಡಾ| ಎಂ. ದೇಜಪ್ಪ ದಲ್ಲೋಡಿ ವಿರಚಿತ `ಶ್ರೀರಾಜರಾಜೇಶ್ವರಿ ದರ್ಶನಂ’ ಎನ್ನುವ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಐವನ್ ಡಿಸೋಜಾ, ಶಾಸಕ ಸುಕುಮಾರ್ ಶೆಟ್ಟಿ, ರಮಾನಾಥ ರೈ, ರಾಜೇಶ್ ನಾಯ್ಕ್, ಯು.ಟಿ. ಆಳ್ವಾ, ಮಂಜಯ್ಯ ಶೆಟ್ಟಿ, ಚೇರ ಸೂರ್ಯನಾರಾಯಣ ರಾವ್, ನಾಗರಾಜ್ ಶೆಟ್ಟಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕೋಡಿಮಜಲು ಅನಂತಪದ್ಮನಾಭ, ಚೇರ ಸೂರ್ಯನಾರಾಯಣ ರಾವ್, ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.


