ಸುದ್ದಿ9:ಮೂಡುಬಿದರೆ: ದಲಿತ ಮೀಸಲಾತಿ ನಿಧಿ,ಉದ್ಯೋಗ ಖಾತರಿ ಯೋಜನೆ ಸಮರ್ಪಕ ಜಾರಿ, ಹಕ್ಕು ಪತ್ರ ಡೋರ್ನಂಬರ್ ನೀಡುವುದು, ಬಿಪಿಎಲ್ ವ್ಯವಸ್ಥೆಯಲ್ಲಿನ ಪಾರದರ್ಶಕತೆ, ಶಿರ್ತಾಡಿ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆ ಡಾಮರೀಕರಣ ಮೂಲಭೂತ ಸೌಕರ್ಯ, ರುಧ್ರಭೂಮಿ ಮೊದಲಾದ ಬೇಡಿಕೆಗಳಿಗೋಸ್ಕರ ಶಿರ್ತಾಡಿ ಗ್ರಾ.ಪಂ. ಕಚೇರಿಗೆ ಸೋಮವಾರ ಮುತ್ತಿಗೆ ಹಾಕಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಹಕ್ಕುಗಳ ಹೋರಾಟ ಸಮಿತಿ, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ ಸಂಘಟನೆಗಳ ನೇತೃತ್ವದಲ್ಲಿ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಸರ್ಕಾರದಿಂದ ಕೊಡುವ ಯೋಜನೆಗಳು ಬಡವರಿಗೆ, ದಲಿತರಿಗೆ ಸಿಗುತ್ತಿಲ್ಲ. ಉದ್ಯೋಗಖಾತರಿಯಂತಹ ಯೋಜನೆಗಳು ಉಳ್ಳವರ ಪಾಲಾಗುತ್ತಿದೆ. ದಲಿತರಿಗೆ ಸಿಕಬೇಕಾದ ಯೋಜನೆಗಳ ಅನುದಾನಗಳನ್ನು ಬೇರೆ ಕೆಲಸಗಳಿಗೆ ಬಳಕೆಯಾಗುತ್ತಿರುವ ಸಂಶಯವೂ ಇದೆ ಎಂದು ಆರೋಪಿಸಿದರು. ಫಲಾನುಭವಿಗಳಿಗೆ ಯೋಜನೆ ಪಡೆಯುವುದು ಮಾತ್ರವಲ್ಲ ಯೋಜನೆಗೆ ಸಮಗ್ರ ಮಾಹಿತಿ ತಿಳಿದು ಕೊಳ್ಳುವ ಹಕ್ಕಿದೆ. ಉದ್ಯೋಗ ಖಾತರಿ ಯೋಜನೆ, ದಲಿತರಿಗೆ, ಅಂಗವಿಕಲರಿಗೆ ಸಿಗುವ ವಿವಿಧ ಸವಲತ್ತು ಹಾಗೂ ಗ್ರಾಮಸ್ಥರಿಗೆ ಸಿಗಬೇಕಾದ ಮನೆ ನಿವೇಶನ ಸಹಿತ ವಿವಿಧ ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸದಿದ್ದಲ್ಲಿ ಪಂಚಾಯಿತಿ ಎದುರು ಪಂಚಾಯಿತಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಉದ್ಯೋಗ ಖಾತರಿ ಯೋಜನೆಯ ಗ್ರಾಮೀಣ ನಿರ್ದೇಶಕಿ ಸವಿತಾ, ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ್ ,ಪಿಡಿಒ ಡಾ.ಮನೋಹರ್ ಪ್ರತಿಭಟನಕಾರರಿಗೆ ಯೋಜನೆಗಳ ಬಗ್ಗೆ ಕೆಲವೊಂದು ಮಾಹಿತಿ ನೀಡಿ ಮನವರಿಕೆ ಮಾಡಿದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾ ಸಹ ಸಂಚಾಲಕ ಲಿಂಗಪ್ಪ ನಂತೂರು, ಪುರಸಭಾ ಸದಸ್ಯೆ ರಮಣಿ, ಹೋರಾಟದ ಪ್ರಮುಖರಾದ ಅಪ್ಪು ಪೂಜಾರಿ, ಜಯರಾಮ ಪೂಜಾರಿ, ಶಂಕರ ವಾಲ್ಪಾಡಿ, ಕೃಷ್ಣಪ್ಪ ಕೊಣಾಜೆ, ಅಬೂಬಕ್ಕರ್, ಜಲಜಾಕ್ಷಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


