ಬಂಟ್ವಾಳ: ಧೈವಾರಾಧಕರ ಸಮಾಲೋಚನಾ ಸಮಾವೇಶವು ಫೆ. ೨೪ರಂದು ಬೆಳಿಗ್ಗೆ ೧೦ಗಂಟೆಗೆ ಬಂಟ್ವಾಳ ತಾಲೂಕಿನ ಏರ್ಯ ಬೀಡಿನಲ್ಲಿ ನಡೆಯಲಿದೆ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ತಿಳಿಸಿದ್ದಾರೆ.
ಅವರು ಬುಧವಾರ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧೈವಾರಾಧನೆಗೆ ಸಂಬಂಧಿಸಿದಂತೆ ನೀತಿ ಸಂಹಿತೆಯ ಕುರಿತಾಗಿ ಚರ್ಚಿಸಿ ಸಮಾನ ನಿರ್ಧಾರವೊಂದಕ್ಕೆ ಬರಲು ಕಾಸರಗೋಡಿನಿಂದ ಕುಂದಾಪುರವರೆಗಿನ ಗುತ್ತಿನವರಿಂದ ಹಿಡಿದು ಕಟ್ಟುವವರವರೆಗಿನ ಎಲ್ಲ ದೈವಾರಾಧಕರ ಪ್ರಾತಿನಿಧಿಕವಾದ ಸಮಾಲೋಚನಾ ಸಮಾವೇಶ ಇದಾಗಿದೆ ಎಂದರು.
ಅರುವ ಅರಸ ಡಾ.ಪದ್ಮರಾಜ ಅಜಿಲರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಬಿ.ಎ.ವಿವೇಕ ದಿಕ್ಸೂಚಿ ಭಾಷಣ ಮಾಡುವರು. ಅಂದು ಸಂಜೆ ನಡೆಯುವ ಸಮಾರೋಪದಲ್ಲಿ ಜ್ಞಾನಪದ ತಜ್ಞ ಡಾ.ವೈ.ಎನ್.ಶೆಟ್ಟಿ ಅವರು ಭಾಗವಹಿಸುವರು ಎಂದು ಹೇಳಿದರು.
ದೈವಾರಾಧನೆಯ ಕುರಿತು ಇಂತಹವೊಂದು ಸಮಾಲೋಚನಾ ಸಭೆಯ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಅಪ್ರಾಯಪಟ್ಟು ನೀಡಿರುವ ನಿರ್ದೇಶನದಂತೆ ಈಸಭೆಯನ್ನು ಆಯೋಜಿಸಲಾಗಿದೆ ಎಂದ ಏರ್ಯ ಅವರು, ನಾವು ನಂಬಿಕೊಂಡು ಬಂದ ದೈವಾರಾಧನೆ ಹಾಸ್ಯಕ್ಕೆ ಒಳಗಾಗದೆ,ಪರಂಪರೆಯನ್ನು ಉಳಿಸಿಕೊಂಡು ಶೃದ್ದಾಭಕ್ತಿಯಿಂದ ಮುಂದುವರಿಯಬೇಕೆಂಬುದು ನನ್ನ ಬಯಕೆಯಾಗಿದ್ದು,ಇದಕ್ಕೆ ಎಲ್ಲರ ಸಹಕಾರದ ಅಗತ್ಯವು ಇದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಹಾಬಲೇಶ್ವರ ಹೆಬ್ಬಾರ್, ಚಂದ್ರಹಾಸ ಶೆಟ್ಟಿ ರಂಗೋಲಿ ಹಾಜರಿದ್ದರು.
