ಬಂಟ್ವಾಳ : ವ್ಯಕ್ತಿಯೊಬ್ಬ ಪ್ರಕೃತಿಯಿಂದ ದೇಹವನ್ನು, ಪಂಚೇಂದ್ರಿಯಗಳಿಂದ ರೂಪವನ್ನು, ಸೂರ್ಯನಿಂದ ಚೈತನ್ಯವನ್ನು ಪಡೆದಿರುವ ಜೀವರಾಶಿಯಾಗಿದ್ದಾನೆ. ನಮ್ಮೆಲ್ಲರಿಗೆ ಸೂರ್ಯ ಬೆಳಕಿನ ರೂಪದಲ್ಲಿ ಶಕ್ತಿಯ ಸಂಪನ್ನತೆಯನ್ನು ನೀಡಿದ್ದಾನೆ. ಪತಂಜಲಿ ಯೋಗ ಸೂತ್ರದಂತೆ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಲು ಸೂರ್ಯ ನಮಸ್ಕಾರ ಸಹಕಾರಿ ಎಂದು ಹಿರಿಯ ಪತ್ರಕರ್ತ , ಶ್ರೀಕ್ಷೇತ್ರ ಏರಮಲೆ ಪ್ರ.ಕಾರ್ಯದರ್ಶಿ ರಾಜಾ ಬಂಟ್ವಾಳ ತಿಳಿಸಿದರು.

ಅವರು ಫೆ. 10ರಂದು ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಮುಂಜಾನೆ ಬ್ರಾಹ್ಮಿ ಮುಹೂರ್ತಕ್ಕೆ ನಡೆದ 108 ಸಾಮೂಹಿಕ ಯೋಗಾಭ್ಯಾಸ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾನವ ದೇಹ ಪ್ರಕೃತಿಯ ಕೊಡುಗೆ. ಅದರಲ್ಲಿ ಮೂಲಾದಾರದಿಂದ ಸಹಸ್ರಾರ ತನಕ ಕುಂಡಲಿನಿ ಶಕ್ತಿಯ ಆರು ಚಕ್ರಗಳ ತುಂಬಿರುವುದು. ರಾಜ ಯೋಗದ ಮೂಲಕ ಅಂತಹ ಶಕ್ತಿಗಳನ್ನು ಉದ್ದೀಪಿಸುವ ಮೂಲಕ ಮಾನವ ಇಂದ್ರಿಯಾತೀತ ಶಕ್ತಿಯನ್ನು ಪಡೆಯಲು ಸಾಧ್ಯ. ಸೂರ್ಯ ನಮಸ್ಕಾರದ ಒಂದು ಮಂತ್ರದ ಮೂಲಕ 12 ವಿಧವಾದ ದೈಹಿಕ ಭಂಗಿಗಳನ್ನು ಮಾಡುತ್ತೇವೆ. ಇದನ್ನು 108 ಸಲ ಮಾಡಿದಾಗ 1296 ಸಲ ದೇಹದ ಭಂಗಿಯನ್ನು ಬದಲಿಸುವ ಮೂಲಕ ಚೈತನ್ಯ ಶಕ್ತಿ ಹರಿಯಲು ಆರಂಭಿಸುತ್ತದೆ ಎಂದರು.

ಅಮಾವಾಸ್ಯೆ ಹುಣ್ಣಿಮೆಗೆ ಚಂದ್ರನ ಪ್ರಭಾವದಿಂದ ಸಮುದ್ರವು ಉಕ್ಕುವಂತೆ, ಸೂರ್ಯ ನಮಸ್ಕಾರ ಮಂತ್ರ ಪಠಣದ ಮೂಲಕ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಯೋಗದಿಂದ ದೇಹದಲ್ಲಿ ಚೈತನ್ಯ ಶಕ್ತಿ , ಆರೋಗ್ಯ, ಮನಸ್ಸಿನಲ್ಲಿ ಆನಂದ, ಉಲ್ಲಾಸ ಉಕ್ಕೇರುವುದು ಎಂದರು.ಯೋಗಗುರು ಡಾ| ರಘುವೀರ ಅವಧಾನಿ ಮಾತನಾಡಿ ಸಾಮೂಹಿಕ ಸೂರ್ಯ ನಮಸ್ಕಾರ ಪ್ರತೀ ವ್ಯಕ್ತಿಯಲ್ಲಿ ಆರೋಗ್ಯ ವರ್ಧನೆಯ ಚೈತನ್ಯ ಶಕ್ತಿ ತುಂಬುವುದು. ರಥ ಸಪ್ತಮಿ ದಿನ ಯೋಗಋಷಿ ಪತಂಜಲಿಯ ಸೂತ್ರದಂತೆ ಉತ್ತರಾಯಣ ಆರಂಭ ಕಾಲವಾಗಿದ್ದು ರೋಗರುಜಿನಗಳು ಹಿಮ್ಮೆಟ್ಟಿ ಎಲ್ಲ ಜೀವರಾಶಿಗಳಲ್ಲಿ ಪ್ರಕೃತಿ ಸಹಜ ಪ್ರಚೋದನೆ ಆಗುವ ಕಾಲ. ಸೂರ್ಯ ನಮಸ್ಕಾರದ ಮೂಲಕ ನಾವು ದೈಹಿಕ ಶಕ್ತಿ ಸಂಪನ್ನತೆಯನ್ನು ಮಹತ್ವ ಪಡೆಯುವ ಮಹತ್ವದ ಕಾಲವಾಗಿದೆ. ಎಂದರು.

ಪ್ರಕೃತಿಯ ಮಡಿಲಾದ ಧಾರ್ಮಿಕ ಕ್ಷೇತ್ರದಲ್ಲಿ ಯೋಗ ಮಾಡುವ ಮೂಲಕ ದೈವ ಚೈತನ್ಯ, ಸೂರ್ಯ ಚೈತನ್ಯದ ಸ್ಪಂದನವನ್ನು ಪಡೆಯುವುದು ಸಾಧ್ಯವಾಗುವುದು. ಇದರಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ದೀರ್ಘವಾಗಿ ಸುರಕ್ಷಿತ ಎಂದು ವಿವರಿಸಿದರು.ಯೋಗವು ದೇಹ ಮತ್ತು ಮನಸ್ಸಿನ ಪಟುತ್ವ ನೀಡುವುದು. ಯೋಗಿ ಎಂದಿಗೂ ರೋಗಿಯಾಗಲಾರ,ಕಾರಣ ಆತನ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಸದಾ ತುಂಬಿರುವುದು. ಶರೀರವನ್ನು ಸಶಕ್ತ ಮಾಡುವುದು ಯೋಗದ ಸಿದ್ದಿ ಎಂದರು.

ಬಿ.ಸಿ.ರೋಡ್‍ನ ವೈದ್ಯ ಡಾ| ಶಿವಪ್ರಸಾದ್ ಶೆಟ್ಟಿ ಸೂರ್ಯ ನಮಸ್ಕಾರದ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಾ ನಾವು ಸೂರ್ಯೋದಯದಲ್ಲಿ ಯೋಗದ ಈ ಕ್ರಿಯೆ ಮಾಡುವ ಮೂಲಕ ದೈಹಿಕವಾಗಿ ಸದಾ ಲವವಲಿಕೆಯನ್ನು ಹೊಂದುವಂತಾಗುವುದು. ಬೆಳಗ್ಗಿನ ಹೊತ್ತು ಮಾಡುವ ಈ ಕ್ರಿಯೆ ನಮ್ಮ ದೈಹಿಕವಾದ ಎಲ್ಲ ಅವಯವಗಳನ್ನು ಕ್ರಿಯಾಶೀಲ ಮಾಡುವುದು ಎಂದರು.ಇಂದು ಎಲ್ಲ ವಿಷಯಕ್ಕೂ ಟಾನಿಕ್ ಬಂದಿದೆ. ಮಾನವನ ಚರ್ಯೆಗಳು ಎಲ್ಲ ಆಧುನಿಕ ವ್ಯವಸ್ಥೆಯನ್ನು ಅವಲಂಬಿಸಿದರೆ ಮುಂದೆ ಒಂದು ದಿನ ಸೂರ್ಯನ ಬೆಳಕನ್ನು ಕೂಡಾ ಗುಳಿಗೆಯ ರೂಪದಲ್ಲಿ ತಿನ್ನಿಸುವ ಕಾಲ ಬರಬಹುದು. ಬೆಳಗ್ಗಿನ ಹೊತ್ತು ಸೂರ್ಯನ ಬೆಳಕನ್ನು ದೈಹಿಕವಾಗಿ ನಾವು ಅಸ್ವಾದಿಸಿದರೆ ಅನ್ನ ಸೂರ್ಯಸ್ನಾನಗಳು ಅವಶ್ಯವಲ್ಲ ಎಂದರು.

ಸೂರ್ಯ ಪ್ರಕೃತಿಯ ದೊಡ್ಡ ಶಕ್ತಿಕೇಂದ್ರವಾಗಿದ್ದು ಮಾನವ ಜೀವರಾಶಿಯ ಎಲ್ಲ ಬೆಳವಣಿಗೆಯ ಹಿಂದೆ ಸೂರ್ಯನೇ ಎಲ್ಲ ರೀತಿಯ ಶಕ್ತಿಯನ್ನು ತುಂಬುವುದಾಗಿದ್ದು ನಾವು ಸೇವಿಸುವ ಆಹಾರ, ನೀರು, ಗಾಳಿ, ಬೆಳಕಿನ ಸರ್ವಸ್ವವೂ ಸೂರ್ಯ ಪ್ರೇರಿತ ಎಂದರು.ಶ್ರೀ ಯೋಗನಿ„ ಪತಂಜಲಿ ಪ್ರತಿಷ್ಠಾನ ಬಂಟ್ವಾಳ ಘಟಕ ವ್ಯವಸ್ಥಾಪಕ ಡಾ| ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ಪ್ರತಿಭಾ ಕೆ. ವಂದಿಸಿದರು. ದಾಮೋದರ ರಾಮಕುಂಜ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *