ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. 5ರಂದು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಯವರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ, ಭಂಡಾರಮನೆಯಲ್ಲಿ ಶುದ್ಧಿ ಕಲಶ, ನಾಗಬನದಲ್ಲಿ ಆಶ್ಲೇಷ ಪೂಜೆ ಹಾಗೂ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಮಾತನಾಡುತ್ತ, ಈ ಮಣ್ಣಿನ ಕಣಕಣದಲ್ಲೂ ದೈವತ್ವ ಅಡಕವಾಗಿದೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಗ್ರಾಪಂ ತನ್ನ ನೆರವು ನೀಡಿದೆ. ಮುಂದೆಯೂ ದೈವಸ್ಥಾನದ ಕೆಲಸಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಿದೆ ಎಂದು ಭರವಸೆಯಿತ್ತರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶೆಡ್ಡೆ ಮಂಜುನಾಥ ಭಂಡಾರಿ ಮಾತನಾಡುತ್ತ, ಹಲವು ದೇವಸ್ಥಾನ ಮತ್ತು ದೈವಾಲಯಗಳ ತಾಣವಾಗಿರುವ ಗುರುಪುರ ಎಲ್ಲೆಡೆ ಹೆಸರುವಾಸಿಯಾಗಿದೆ. ಮನಸ್ಸು ದೊಡ್ಡದಾಗಿದ್ದರೆ ಹಣ ಬೇಕಿಲ್ಲ ಎಂಬುದಕ್ಕೆ ಅಲ್ಪಾವಧಿಯಲ್ಲಿ ನಿರ್ಮಾಣಗೊಂಡಿರುವ ಈ ದೈವಾಲಯವೇ ಸಾಕ್ಷ್ಯಿಯಾಗಿದೆ ಎಂದರು.
ಮಂಗಳೂರು ಲೇಡಿಗೋಶನ್ ಆಸ್ಪತ್ರೆಯ ಆರ್ಎಂಒ ಡಾ. ದುರ್ಗಾಪ್ರಸಾದ್ ದೈವ ಮತ್ತು ದೇವರ ಪರಿಕಲ್ಪನೆ ಹಾಗೂ ಮನುಷ್ಯತ್ವ ಸೂಕ್ಷ್ಮ ವಿಚಾರ ಮಂಡಿಸಿದರು. ಶ್ರೀಕ್ಷೇತ್ರ ಪಡ್ಯಾರಬೆಟ್ಟು ದೈವಸ್ಥಾನದ ರಾಮದಾಸ ಆಸ್ರಣ್ಣ, ಚಂದ್ರಕಾಂತ ಭಟ್(ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿರ ಗುರುಪುರ) ಮುಂಡಿತ್ತಾಯ ದೈವಸ್ಥಾನ ನಿರ್ಮಾಣದ ಹಿಂದಿನ ಶ್ರಮ, ದೈವಗಳ ಉಪಾಸನೆಯೊಂದಿಗೆ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಪ್ರಸನ್ನ ಆಸ್ರಣ್ಣ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಶ್ರಮಿಸಿದವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ ಕತಾರ್ ದೋಣಿಂಜೆಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ. ಸುಕುಮಾರ ಶೆಟ್ಟಿ ದೋಣಿಂಜೆಗುತ್ತು, ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಪಾಂಡುರಂಗ ಕಾಮತ್, ಜಯಶೀಲ ಶೆಟ್ಟಿ ಏತಮೊಗರುಗುತ್ತು ಇದ್ದರು. ಕಿಟ್ಟಣ್ಣ ರೈ ಕಾರಮೊಗರುಗುತ್ತು ಸ್ವಾಗತಿಸಿದರು. ಜಿ. ಲಕ್ಷ್ಮಣ ಶೆಟ್ಟಿ ಗುರುಪುರ ಕಾರ್ಯಕ್ರಮ ನಿರೂಪಿಸಿದರೆ, ರಾಜೀವ ಶೆಟ್ಟಿ ಸಲ್ಲಾಜೆ ವಂದಿಸಿದರು. ಬಳಿಕ ವಿಶ್ವಾಸ ಮೆಲೊಡೀಸ್ ತಂಡದವರಿಂದ ಭಕ್ತಗೀತೆ-ರಸಮಂಜರಿ ಜರುಗಿತು.
