ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿನ್ನರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಕರಾವಳಿ ಕಲೋತ್ಸವ 2018 ಇದರ ಸಮಾರೋಪ ಸಮಾರಂಭ ಭಾನುವಾರ ಸಂಜೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಅಸೊಸಿಯೇಟ್ಸ್ ಮೈದಾನದಲ್ಲಿ ನಡೆಯಿತು.
ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲೆಗಳ ಪ್ರೋತ್ಸಾಹದಿಂದ ಸಂಸ್ಕಾರ, ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಾಧ್ಯವಿದೆ. ಅಂತಹ ಪ್ರಯತ್ನ ಕರಾವಳಿ ಕಲೋತ್ಸವದ ಮೂಲಕ ನಡೆದಿದೆ ಎಂದರು.
ಹತ್ತು ದಿನದ ಕಲೋತ್ಸವನ್ನು ನಡೆಸುವುದು ಸುಲಭದ ಮಾತಲ್ಲ ಆದರೆ ಎಲ್ಲಾ ಸಮಿತಿಗಳ ಸದಸ್ಯರ, ಕಾರ್ಯಕರ್ತರ ಅವಿರತ ಶ್ರಮ ಹಾಗೂ ಜನರ ಸಹಕಾರದಿಂದಾಗಿ ಹತ್ತು ದಿನಗಳ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಬಂಟ್ವಾಳ ತಾಲೂಕಿನಲ್ಲಿ ಹೊಸ ಸಾಂಸ್ಕøತಿಕ ಇತಿಹಾಸವನ್ನೇ ಸೃಷ್ಟಿ ಮಾಡಿದೆ ಎಂದರು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲಾ ವರ್ಗದ ಜನರು ಕಲೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿರುವುದು ಮನಸ್ಸಿಗೆ ಖುಷಿ ನೀಡಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಪುರಂದರ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸೂಕ್ಷ್ಮ ಪ್ರದೇಶವೆನ್ನುವ ಬಂಟ್ವಾಳದಲ್ಲಿ ಕಲೋತ್ಸವದಂತಹ ದೊಡ್ಡಮಟ್ಟದ ಸಾಂಸ್ಕøತಿಕ ಉತ್ಸವ ನಡೆಯುವ ಮೂಲಕ ಇಲ್ಲಿನ ಜನರಲ್ಲಿ ಹೊಸ ಸಂಭ್ರಮ ಮೂಡಿಸಿದೆ, ಪ್ರತಿಭೆಗಳಿಗೆ ವೇದಿಕೆ ಒದಗಿಸಿರುವುದು ಮಾತ್ರವಲ್ಲದೆ ಜನರು ತಮ್ಮ ದೈನಂದಿನ ಒತ್ತಡಗಳನ್ನು ಮರೆತು ಮನೋರಂಜನೆ ಪಡೆಯಲು ಕಲೋತ್ಸವದ ಅವಕಾಶ ಮಾಡಿಕೊಟ್ಟಿದೆ. ಇಂತಹ ಕಾರ್ಯಕ್ರಮಗಳು ತಾಲೂಕಾಡಳಿತಕ್ಕೂ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು. ನಾಟಕಗಳು ನಮ್ಮ ಬದುಕಿನ ವಾಸ್ತವತೆಯನ್ನು ತಿಳಿಸುವ ಮಾಧ್ಯಮವಾಗಿದ್ದು ನಾಟಕೋತ್ಸವವನ್ನು ಆಯೋಜಿಸುವ ಮೂಲಕ ಮನೋರಂಜನೆಯೊಂದಿಗೆ ಉತ್ತಮ ಸಂದೇಶವನ್ನು ನಾಟಕಗಳು ನೀಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ ಅತ್ತಾವರ, ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್, ರಂಗ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಬೆಂಗಳೂರು, ಲೆಕ್ಕಪರಿಶೋಧಕ ಯತೀಶ್ ಭಂಡಾರಿ, ಚಿಣ್ಣರಲೋಕ ಸೇವಾ ಟ್ರಸ್ಟ್ನ ಗೌರವ ಅಧ್ಯಕ್ಷ ಪಿ. ಜಯರಾಮ ರೈ ವಿಟ್ಲ, ನ್ಯಾಯವಾದಿ ನರೇಂದ್ರನಾಥ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್, ಪ್ರಧಾನ ಸಂಚಾಲಕ ಮೋಹನದಾಸ್ ಕೊಟ್ಟಾರಿ, ಗೌರವಾಧ್ಯಕ್ಷ ಪಿ. ಜಯರಾಮ ರೈ ಸಹಿತ ನಾಟಕೋತ್ಸವ ಹಾಗೂ ರಾಜ್ಯಮ,ಟ್ಟದ ನೃತ್ಯ ಸ್ಪರ್ಧೆಯ ತೀರ್ಪುಗಾರರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರನ್ನು ಶಾಲು, ಹಾರ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ನಿರ್ದೇಶಕ ಲೋಕೇಶ್ ಸುವರ್ಣ ಸ್ವಾಗತಿಸಿ, ವಂದಿಸಿದರು, ಸಂಸ್ಥಾಪಕ ಮೋಹನ್ದಾಸ್ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿದರು, ನಿರ್ದೇಶಕ ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿಧಾತ್ರಿ ಕಲಾವಿದೆರ್ ಕೈಕಂಬ ಅಭಿನಯದ ತುಳು ಹಾಸ್ಯ ನಾಟಕ ನಡೆಯಿತು. ಭಾನುವಾರ 35 ಸಾವಿರಕ್ಕಿಂತಲೂ ಅಧಿಕ ಮಂದಿ ಕರಾವಳಿ ಕಲೋತ್ಸವದ ಮೈದಾನದಲ್ಲಿ ಜಮಾಯಿಸಿದ್ದರು. ಸಾರ್ವಜನಿಕ ಬೇಡಿಕೆಯ ಮೇರೆಗೆ ವರ್ಷಾಂತ್ಯದ ಸಂಭ್ರಮದ ಹಿನ್ನಲೆಯಲ್ಲಿ ಸೋಮವಾರವೂ ಕಲೋತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಮುಂದುವರೆಯಿತು.
