ಬಂಟ್ವಾಳ: ಸುಜೀರು ಸರಕಾರಿ ಪ್ರೌಢಶಾಲಾ ನೂತನ ಸಭಾಂಗಣದ ಉದ್ಘಾಟನಾ ಸಮಾರಂಭ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಭಾಂಗಣ ಉದ್ಘಾಟಿಸಿದರು. ಅವರು ಮಾತನಾಡಿ ಹಿಂದೆ ಯುಪಿಎ ಸರಕಾರ ಅಧಿಕಾರವಿದ್ದಾಗ ಸರ್ವಶಿಕ್ಷ ಅಭಿಯಾನದಲ್ಲಿ ಶಾಲೆಯ ಖಾತೆಗೆ ಹಣ ಬರುತ್ತಿದ್ದು ಶಾಲೆಯ ಅಗತ್ಯತೆಯ ಅನುಗುಣವಾಗಿ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗಿನ ಕೇಂದ್ರ ಸರಕಾರದಿಂದ ಒಂದೂ ಕೊಠಡಿ ನಿರ್ಮಾಣಕ್ಕೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.
ಮಕ್ಕಳು ತಂದೆ ತಾಯಿಯ ಆಸ್ತಿ ಮಾತ್ರವಲ್ಲ, ಅವರು ಸಮಾಜದ ಆಸ್ತಿ, ಎಷ್ಟೇ ಕಷ್ಟವಾದರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು. ಮುಂದೊಂದು ದಿನ ಅವರು ಶಿಕ್ಷಿತರಾಗಿ ಆರ್ಥಿಕ ವಾಗಿ ಬಲಾಢ್ಯರಾದಾಗ ಅವರಲ್ಲಿ ಆತ್ಮವಿಶ್ವಾಸವೇ ಬದಲಾಗುತ್ತದೆ. ಇಂತಹ ಕ್ರಾಂತಿಕಾರಿ ಬದಲಾವಣೆ ಪ್ರತೀ ಮನೆಯಲ್ಲೂ ಆಗಬೇಕು ಎಂದರು. ಶಿಕ್ಷಕರ ಬೇಡಿಕೆಗೆ ಸ್ಪಂದಿಸಿದ ಸಚಿವರು ಶಾಲೆಯ ವಿಸ್ತøತ ಕಟ್ಟಡ ನಿರ್ಮಾಣಕ್ಕೆ ತನ್ನ ಶಾಸಕ ನಿಧಿಯಲ್ಲಿ 5 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.
ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮ್ಮರ್ ಫಾರೂಕ್ ಪ್ರಮುಖರಾದ ಯೂಸುಫ್ ಅಲಂಕಾರು, ಪ್ರಕಾಶ್ಚಂದ್ರ ರೈ ದೇವಸ್ಯ ಪಂಚಾಯತ್ ಉಪಾಧ್ಯಕ್ಷೆ ಲೀಡಿಯಾ ಪಿಂಟೋ ಸದಸ್ಯರಾದ ಹಾಸೀರ್ ಫೇರಿಮಾರ್, ಭಾಸ್ಕರ್, ಕಿಶೋರ್, ಇಕ್ಬಾಳ್ ಸುಜೀರ್, ರಝೀಯಾ, ಝೀನತ್, ರೆಹೆನಾ, ಮಮ್ತಾಝ್, ಹೇಮಲತಾ, ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಸಲಾಂ ಮಲ್ಲಿ, ಮುಖ್ಯ ಶಿಕ್ಷಕಿ ಶಶಿಮಂಗಳ, ಮಹಮ್ಮದ್ ಬಾವಾ, ಅಬ್ದುಲ್ ಖಾದರ್, ಹುಸೈನ್, ಮಜೀದ್ ಫರಂಗಿಪೇಟೆ ಮತ್ತಿತರರು ಹಾಜರಿದರು. ಶಿಕ್ಷಕ ಬಿ.ಎಂ.ತುಂಬೆ ಸ್ವಾಗತಿಸಿದರು, ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸಚಿವರು ಸನ್ಮಾನಿಸಿದರು. ಇದೇ ಸಂದರ್ಭ ಶಾಲೆಯ ವಾರ್ಷಿಕ ಕ್ರೀಡಾಕೂಟ ನಡೆಯಿತು.
