ಮೂಡುಬಿದಿರೆ:ಬಪ್ಪನಾಡು ಮೇಳದ ರಂಗಸ್ಥಳ ಎಂದರೆ ಒಮ್ಮೆ ಮೈ ರೋಮಾಂಚನವಾಗುತ್ತದೆ. ಆ ಕ್ಷೇತ್ರ ಅಷ್ಟು ಕಾರಣಿಕವಾದದು. ಯಕ್ಷಗಾನ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಬಪ್ಪನಾಡು ಕ್ಷೇತ್ರವು ಯಕ್ಷಗಾನ ಕಲಾವಿದರನ್ನು ಪೋಷಿಸಿ ಬೆಳೆಸಿಕೊಂಡು ಬಂದಿದೆ. ಕಲಾವಿದರಿಗೆ ದೇವಿಯ ಅನುಗ್ರಹವು ಸಿಗುತ್ತಿದೆ ಎಂದು ಯಕ್ಷಗಾನ ಭಾಗವತ, ಪಟ್ಲ ಪೌಂಡೇಶನ್ನಿನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಕೋರ್ದಬ್ಬು ಬಾರಗ ಯಕ್ಷಗಾನ ಸೇವಾ ಸಮಿತಿ ಮತ್ತು ಕಲ್ಲಮುಂಡ್ಕೂರು ಗ್ರಾಮಸ್ಥರ ಪರವಾಗಿ ಭಾನುವಾರ ದೈಲಬೆಟ್ಟು ದೇವಸ್ಥಾನದ ಆವರಣದಲ್ಲಿ ಹವ್ಯಾಸಿ ಭಾಗವತ ಕಲ್ಲಮುಂಡ್ಕೂರಿನ ಅನಂತರಾಮ್ ಭಟ್ ಮತ್ತು ಬಪ್ಪನಾಡು ಮೇಳದ ಭಾಗವತ ಕಡಬ ರಾಮಚಂದ್ರ ರೈ ಅವರಿಗೆ `ಮಂಜಯ ಶೆಟ್ಟಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ರಾಮಚಂದ್ರ ರೈ ನನ್ನ ನೆಚ್ಚಿನ ಭಾಗವತರು ಹಾಗೂ ಅವರ ಭಾಗವತಿಗೆ ಕೇಳುವುದೆಂದರೆ ಅದಕ್ಕಿಂತ ಸಂತೋಷಕರ ಸಂಗತಿ ಮತ್ತೊಂದಿಲ್ಲ. ಹಿರಿಯ ಕಲಾವಿದ ಅನಂತರಾಮ್ ಭಟ್ ಅವರನ್ನು ಸನ್ಮಾನಿಸಿದ್ದು ಕಲ್ಲಮುಂಡ್ಕೂರಿಗೆ ಗೌರವ ಸಿಕ್ಕಂತೆ ಎಂದರು.
ಶ್ರೀಕ್ಷೇತ್ರ ದೈಲಬೆಟ್ಟು ಇದರ ಆಡಳಿತ ಮೊಕ್ತೇಸರ ಜಯಪ್ರಕಾಶ್ ಪಡಿವಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ದೈಲಬೆಟ್ಟು ದೇವಸ್ಥಾನದ ಪ್ರಧಾನ ಅರ್ಚಕ ಮಂಜುನಾಥ ಭಟ್ ಆಶೀರ್ವಚನ ನೀಡಿದರು. ದೇವಿಕೃಪಾ ಬಿಲ್ಡರ್ ಮಾಲಕ ಜಯರಾಮ ಶೆಟ್ಟಿ, ವಿಠೋಬ ರುಕ್ಮಯಿ ಭಜನಾ ಮಂದಿರದ ಈ ಸಂದರ್ಭದಲ್ಲಿ ಅಧ್ಯಕ್ಷ ಶಾಂತರಾಮ ಕಾಮತ್, ಬಿಲ್ಲವ ಸಂಘದ ಅಧ್ಯಕ್ಷ ಗಂಗಾಧರ.ಕೆ, ಗ್ರಾಮ ಪಂಚಾಯತಿ ಸದಸ್ಯ ಜೋಕಿಂ ಕೊರೆಯ ಉಪಸ್ಥಿತರಿದ್ದರು. ಶಂಕರಮೂರ್ತಿ ಭಟ್ ಮತ್ತು ತಿಮ್ಮಪ್ಪ ಸುವರ್ಣ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದ ಪ್ರಮುಖ ಸಂಘಟಕ ಗಂಗಾಧರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಗಣೇಶ್ ಶೆಟ್ಟಿ ಮುಚ್ಚೂರು ಸ್ವಾಗತಿಸಿದರು. ಗುರು ಪಿ.ಎಂ., ನಿರೂಪಿಸಿದರು. ಅಶೋಕ್ ನಾಯಕ್ ವಂದಿಸಿದರು.
