ಮೂಡುಬಿದಿರೆ: ದ.ಕ. ಜಿಲ್ಲಾ ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾ.ಪಂ.ನ 2018-19 ರ ಸಾಲಿನ ಮಕ್ಕಳ ಗ್ರಾಮಸಭೆಯನ್ನು ಶುಕ್ರವಾರ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಮಾಂಟ್ರಾಡಿ ಇದರ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಮಾಂಟ್ರಾಡಿ ಶಾಲಾ ವಿದ್ಯಾರ್ಥಿ ನಾಯಕ ವಿಶ್ಮಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಸರಕಾರವು ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಇದರಿಂದ ಮೌಲ್ಯಯುತ ಶಿಕ್ಷಣ ಪಡೆಯಲು ನಾವು ಅಗತ್ಯ ಪ್ರಯತ್ನ ಮಾಡಬೇಕು. ನೆಲ್ಲಿಕಾರು ಗ್ರಾ.ಪಂ. ತನ್ನ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ನಿರೀಕ್ಷೆಗೂ ಮೀರಿದ ಸಹಕಾರ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ಸಿಬ್ಬಂದಿ ಬ್ರಹ್ಮಾನಂದ ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಮಕ್ಕಳ ಗ್ರಾಮಸಭೆಯ ವಿವರ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಮಾಂಟ್ರಾಡಿ ಶಾಲಾ ಮುಖ್ಯ ಶಿಕ್ಷಕಿ ಮಾರ್ಗರೇಟ್ ಡಿ’ಸೋಜಾ ಶಿಕ್ಷಣ ಇಲಾಖೆಯ ಸವಲತ್ತು ಬಗ್ಗೆ ಮಾಹಿತಿ ನೀಡಿದರು.
ಬಳಿಕ ಗ್ರಾ.ಪಂ. ವ್ಯಾಪ್ತಿಯೆಲ್ಲಾ ಪ್ರಾಥಮಿಕ ಶಾಲೆಗಳ ಮಕ್ಕಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಜಯಂತ ಹೆಗ್ಡೆ, ಉಪಾಧ್ಯಕ್ಷ ಕುಶಲಾ, ಸದಸ್ಯರಾದ ಭರತಿ, ಹರೀಶ ಆಚಾರಿ, ಯಶೋಧ, ಉದಯ, ಸಂತೋಷ, ಸುನಂದ, ಶಶಿಧರ ಎಂ. ಹಾಗೂ ಸರಸ್ವತಿ ನಾಯ್ಕ ಉಪಸ್ಥಿತರಿದ್ದರು.
ಗ್ರಾ.ಪಂ. ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಶೇಖರ್ ವಂದಿಸಿದರು. ಸಿಬ್ಬಂದಿಗಳಾದ ರೇಣುಕಾ, ಲಕ್ಷ್ಮಣ ಮತ್ತು ಪ್ರಮೀಳಾ ಸಹಕರಿಸಿದರು.

