ಗುರುಪುರ : ಬ್ರಿಟಿಷರ ಆಳ್ವಿಕೆಗೆ ಮುಂಚೆ ಸಹಬಾಳ್ವೆ ಹೊಂದಿದ್ದ ತುಳುನಾಡಿನಲ್ಲಿ ಭವ್ಯ ಪರಂಪರೆ ಹೊಂದಿದ್ದ ತುಳುನಾಡಿನ ಗುತ್ತು, ಬಾರಿಕೆ, ಗಡಿಕಾರ, ಭಂಡಾರ ಮನೆಗಳು ಸಾಮಾಜಿಕ ನ್ಯಾಯಸ್ಥಾನಗಳಾಗಿದ್ದವು. ಒಡೆದು ಆಳುವ ರಾಜಕೀಯದಿಂದ ಅಧಃಪತನಗೊಂಡ ಈ ಪದ್ಧತಿಯ ಮರುನೆಲೆಗೊಳಿಸುವ ನಿಟ್ಟಿನಲ್ಲಿ ಗುರುಪುರ ಗೋಳಿದಡಿಗುತ್ತಿನ ಗಡಿಕಾರ ದುರ್ಗಾಪ್ರಸಾದ ಶೆಟ್ಟಿ ಯಾನೆ ವರ್ಧಮಾನರ ನಾಯಕತ್ವದಲ್ಲಿ ಜನವರಿ 19ರಂದು ಗುತ್ತುಗಳ ಬಗ್ಗೆ ಸಮಗ್ರ ಅವಲೋಕನ, ಚಿಂತನ-ಮಂಥನ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ.
`ಗುತ್ತುಗಳು ನಿಮಗೆಷ್ಟು ಗೊತ್ತು ?’ ಬ್ಯಾನರಿನಡಿ ಜರುಗಲಿರುವ ಈ ವಿಚಾರಗೋಷ್ಠಿ ಹಿನ್ನೆಲೆಯಲ್ಲಿ ಡಿ. ಒಂದರಂದು ಗೋಳಿದಡಿಗುತ್ತಿನಲ್ಲಿ ವರ್ಧಮಾನರ ಅಧ್ಯಕ್ಷತೆಯಲ್ಲಿ 50ಕ್ಕೂ ಹೆಚ್ಚು ಗುತ್ತಿನ ಮನೆಯವರು ಪೂರ್ವಭಾವಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಗುತ್ತುಗಳ ಚೌಕಟ್ಟು, ಕರ್ತವ್ಯಗಳ ಚರ್ಚೆ ಹಾಗೂ ವಿಚಾರಗೋಷ್ಠಿ ಸಿದ್ಧತೆ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು.
ಜ. 19ರಂದು ಮೂರು ಅವಧಿಯಲ್ಲಿ ಮೂರು ಉಪನ್ಯಾಸ ಜರುಗಲಿದೆ. ಇದರಲ್ಲಿ ತುಳುನಾಡ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ಕುಂಡಂತ್ತಾಯ, ವೈ ಎನ್ ಶೆಟ್ಟಿಯವರು ತುಳುನಾಡಿನ ಗುತ್ತುಗಳ, ಮನೆತನಗಳ ಆಳ-ವಿಸ್ತಾರದ ಕುರಿತು ವಿಶ್ಲೇಷಣಾತ್ಮಕ ವಿಚಾರ ಮಂಡಿಸಲಿದ್ದಾರೆ. ಗೋಷ್ಠಿಯಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳ ಬಗ್ಗೆ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸುಲಿರುವ ವರ್ಧಮಾನರು ಎಲ್ಲರಿಗೂ ಮನದಟ್ಟು ಮಾಡಲಿದ್ದಾರೆ.
ಸಭೆಯಲ್ಲಿ ಇತರ ಸಮಿತಿಗಳ ಸಹಿತ ವಿಭಾಗವಾರು ಸಮಿತಿ ರಚನೆಗಾಗಿ ಚರ್ಚೆ ನಡೆಯಿತು. ಸ್ವಾಗತ ಮತ್ತು ಪ್ರಚಾರ ಸಮಿತಿ ಸದಸ್ಯರ ನಿಯುಕ್ತಿಗೊಳಿಸಲಾಯಿತು. ಸಭೆಯಲ್ಲಿ ಗುತ್ತುನವರು, ಗಡಿಕಾರರು, ಭಂಡಾರ ಮನೆ, ಬಿಲ್ಲವರ ಹಾಗೂ ಮೊಗವೀರ ಮನೆತನಗಳಿಗೆ ಸಂಬಂಧಿತರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸದಾನಂದ ಗಂಭೀರ್, ಸತೀಶ್ ಶೆಟ್ಟಿ ವಾಮಂಜೂರು, ಗುರುರಾಜ ಮಾಡ, ಭಾಗ್ಯರಾಜ ಆಳ್ವ, ಸದಾಶಿವ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಸತೀಶ್ ಕಾವ, ರೋಹಿತಾಶ್ವ ಭಂಡಾರಿ, ದಾಮೋದರ ಶೆಟ್ಟಿ, ದಿವಾಕರ ಸಾಮನಿ, ಮೋಹನದಾಸ ಶೆಟ್ಟಿ, ಮಾಜಿ ಮೇಯರ್ ರಜನಿ ದುಗ್ಗಣ್ಣ, ರೋಹಿತ್ ಶೆಟ್ಟಿ ಕಟೀಲು, ಮಂಜುನಾಥ ಶೆಟ್ಟಿ, ರಾಜೀವ ಅಪ್ಪನ ಬೆಟ್ಟು, ಪ್ರಶಾಂತ್ ಮುಂಡ, ಸುನೀಲಾ ಪಿ. ಶೆಟ್ಟಿ, ಪದ್ಮನಾಭ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿರೂಪಿಸಿದ ಪರಮಾನಂದ ಸಾಲ್ಯಾನ್ ವಂದಿಸಿದರು.
