ಈ ಆಧುನಿಕ ಜಗತ್ತಿನಲ್ಲಿ ಕೆಮಿಕಲ್ ಮಿಶ್ರಿತ ಆಹಾರ ಸೇವಿಸಿ ಆರೋಗ್ಯ ಹದಗೆಡುತ್ತಿದ್ದರೆ, ಇನ್ನೊಂದೆಡೆ ನಮ್ಮ ಸಂಸ್ಕøತಿಯ ನಾಶ. ಹಿಂದೆ ಇದ್ದಂತಹ ಸಾಂಪ್ರಾದಾಯಿಕ ಕೃಷಿ, ಸಾಂಪ್ರಾದಾಯಿಕ ಆಚರಣೆ ಹಾಗೂ ಸಾಂಪ್ರಾದಾಯಿಕ ವಿಚಾರಗಳು ನಶಿಸಿಹೋಗುತ್ತಿದೆ. ಶಿಕ್ಷಣದಿಂದಾಗಿ ಉದ್ಯೋಗ, ಬುಂದ್ಧಿವಂತಿಕೆ ಸಿಕ್ಕರೂ ಜನರೂ ಮಾತ್ರ ಆಧುನಿಕತೆಗೆ ಓಗೊಟ್ಟು ತಮ್ಮನ್ನು ತಾವೇ ಸಾಂಪ್ರಾದಾಯಗಳಿಂದ ದೂರ ಮಾಡುತ್ತಿದ್ದಾರೆ.

ಇನ್ನು ಕೃಷಿಯಲ್ಲಿ ಸಾಂಪ್ರಾದಾಯಿಕ ಕೃಷಿಗೆ ಹೋಲಿಕೆ ಮಾಡಿದರೆ ಇಂದಿನ ಪರಿಸರಕ್ಕೆ ತಂತ್ರಜ್ಞಾನದ ಅಗತ್ಯವಿದೆ. ಅದೇಷ್ಟೋ ಯುವಕರು ಹೆಚ್ಚಿನ ಶಿಕ್ಷಣ ಪಡೆದು ಬೇರೆ ದೇಶಗಳಿಗೆ ಹೋಗಿ ಅಲ್ಲಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕಷ್ಟಪಟ್ಟು ದುಡಿಯೋದು ಸಾಮಾನ್ಯವಾಗಿದೆ. ಆದರೆ ಇವರ ಮಧ್ಯೆ ಬೆರಳೆಣಿಕೆಯ ಕೆಲವರು ಶಿಕ್ಷಣದ ನಂತರ ಕೃಷಿಯೇ ಜೀವಾಳ ಎಂದು ಅದರಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹಳ್ಳಿಯಲ್ಲಿಯೇ ವ್ಯವಸಾಯ ಸಾದನೆಗೆ ನಿಂತವರಲ್ಲಿ ಒಬ್ಬರಾದವರು ಮೂಡುಬಿದಿರೆ ಅಂಬೂರಿ ನಾಗರಾಜ ಶೆಟ್ಟಿ.
ಇವರು ಮೂಡುಬಿದಿರೆ ಬೆಳುವಾಯಿ ಅಂಬೂರಿ ನಿವಾಸಿ. ಇವರ ತಂದೆ ಕೃಷಿಯನ್ನೇ ಬದುಕಾಗಿಸಿಕೊಂಡವರು. ಹೀಗಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಇವರು ಕೃಷಿ ಸಾಧನೆಬಗ್ಗೆ ಕನಸು ಕಂಡವರು. ಕೃಷಿ ಅವರ ಆಸಕ್ತಿ ಕ್ಷೇತ್ರವಾಗಿದ್ದರೂ, ಡಿಪ್ಲೊಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿ, ಪೋಲಿಸ್ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಆದರೆ ಇವೆಲ್ಲದರಿಂದ ದೂರ ಸರಿದು ತಮ್ಮ ಕನಸಿನ ಸ್ವರ್ಗ ನಿರ್ಮಿಸುವಲ್ಲಿ ಮುಂದಾಗಿದ್ದಾರೆ. ಅಂತೆಯೇ ಸುಮಾರು 20 ಎಕರೆ ಜಮೀನನ್ನು ಖರೀದಿಸಿ ತಮ್ಮ ಮನೆಯ ಸುತ್ತ ಕೃಷಿಯನ್ನು ಆರಂಭಿಸಿದರು. ಇವರು ಮೊದಲಿಗೆ ಕ್ಯಾವೆಂಡಿಸ್ ಬಾಳೆಯಲ್ಲಿ ಹಾಗೂ ಅನಾನಸು ಕ್ರಷಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಮೊದಲ ಪ್ರಯತ್ನದಲ್ಲೇ ಹೆಚ್ಚಿನ ಲಾಭ ಪಡೆದರು. ನಂತರದ ದಿನಗಳಲ್ಲಿ ತೆಂಗು, ಭತ್ತ, ಬಾಳೆ, ಕರಿಮೆಣಸು, ರಾಂಬೊಟು, ರೆಡ್ಪ್ರೂಟ್, ಪೇರಳೆ ಬೆಳೆದರು. ಕೃಷಿಯಲ್ಲಿ ಉತ್ತಮ ಲಾಭ ಗಳಿಸಿ ತಮ್ಮ ಕನಸಿನ ಕೃಷಿ ಅರಮನೆಯನ್ನು ಪ್ರವೇಶ ಮಾಡಿದ್ದಾರೆ.

ಇವರು ಪಡೆದ ಶಿಕ್ಷಣಕ್ಕೆ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿ ಏಳಿಗೆ ಕಂಡಿದ್ದಾರೆ. ಇಷ್ಟೆ ಅಲ್ಲದೇ ಅವರು ತಾವು ಬೆಳೆದ ಬೆಳೆಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಾರೆ. ಇದಕ್ಕಾಗಿ ಬೇಕಾದ ಎಲ್ಲಾ ರೀತಿಯ ಲೈಸನ್ಸ್ ಕೂಡ ಪಡೆದಿದ್ದಾರೆ.
ಮುಖ್ಯ ಬೆಳೆಗಳಾದ ಅಡಿಕೆ, ಭತ್ತ, ಬಾಳೆಹಣ್ಣುಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ ಉಪಬೆಳೆಗಳನ್ನು ಇವರು ಬೆಳೆಸುತ್ತಾರೆ. ಆಯಾಯ ಕಾಲಕ್ಕೆ ತಕ್ಕಂತೆ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ. ಅಲ್ಲದೇ ಆದಾಯ ಕಮ್ಮಿ ಆದಾಗ ಸುಮ್ಮನಿರದೆ ಉಪಬೆಳೆಗಳಾದ ತೊಂಡೆಕಾಯಿ ಬಸಳೆಯನ್ನು ಹೆಚ್ಚಾಗಿ ಬೆಳೆದು ತಮ್ಮ ಲಾಭವನ್ನು ಸರಿದೂಗಿಸುತ್ತಾರೆ. ಇವರ ಈ ಎಲ್ಲಾ ಲಾಭಕ್ಕೆ ಐದು ಮಂದಿ ಸಹಾಯಕರು ಕೈಜೋಡಿಸಿದ್ದು, ದಿನ ಬೆಳಗ್ಗೆ 5ಗಂಟೆಯಿಂದ ಇವರ ಕೆಲಸ ಆರಂಭವಾಗುತ್ತದೆ. 130 ಕ್ವಿಂಟಲ್ ಅನಾನಸು ಕೃಷಿ, ಭತ್ತದ ಕೃಷಿಯಲ್ಲಿ 130-140 ಕ್ವಿಂಟಲ್ ಬೆಳೆದ ಹೆಗ್ಗಳಿಕೆ ಇವರದು.
ಕೃಷಿಯಲ್ಲಿ ಸಫಲರಾಗಿ ಸಪ್ತಗಿರಿ ಕೋಳಿ ಪೌಲ್ಟ್ರಿ ಕೂಡ ತೆರೆದಿದ್ದಾರೆ. ಈ ಪೌಲ್ಟ್ರಿಯಲ್ಲಿ ಸುಮಾರು 200ಸಾವಿರ ಕೋಳಿಗಳೀದ್ದು, 700 ನಾಟಿಕೋಳಿಗಳಿವೆ. ಹಾಗೂ ಬೆಳುವಾಯಿಯಲ್ಲಿ ಚಿಕನ್ ಕಟ್ಟಿಂಗ್ ಅಂಗಡಿಯೂ ಇದೆ. ಇದರ ಜೊತೆಗೆ ಹೈನುಗಾರಿಕೆಯನ್ನು ಕೃಷಿಯ ಒಂದು ಭಾಗವಾಗಿ ಅಳವಡಿಸಿಕೊಂಡಿದ್ದಾರೆ.
ನಾಗರಾಜ್ ಅವರ ಮತ್ತೊಂದು ವಿಶೇಷ ಎಂದರೆ ಅವರು ಔಷಧೀಯ ಸಸ್ಯರಾಶಿ. ಅವರ ಜಮೀನಿನ ಒಂದೆಡೆಯಲ್ಲಿ ಔಷಧೀಯ ಗುಣಗಳುಳ್ಳ ಗಿಡಗಳನ್ನು ನೆಟ್ಟಿದ್ದಾರೆ. ಇದು ಇನ್ನೊಂದು ಆಕರ್ಷಣೆಯಾಗಿದೆ. ತಾವಾಯ್ತು, ತಮ್ಮ ಕೆಲಸವಾಯ್ತು ಅನ್ನುವ ಈ ಕಾಲದಲ್ಲಿ ಇವರು ಮಾತ್ರ ಕೃಷಿಯ ಜೊತೆಗೆ ಸಮಾಜಸೇವೆಯಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಕೃಷಿ ಸಾಧನೆ ಒಂದೆಡೆಯಾದರೆ, ಇನ್ನೊಂದೆಡೆ ಸಮಾಜಸೇವೆ. ಹಲವಾರು ಸಂಘ ಸಂಸ್ಥೆಯೊಂದಿಗೆ ಕೈಜೋಡಿಸಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು, ಬಡತನದಿಂದ ಜೀವನ ಸಾಗಿಸುವವರು, ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿ ಸಹಕಾರ ನೀಡುತ್ತಾರೆ. ಹಲವಾರು ಸಂಘದಲ್ಲಿ ಸದಸ್ಯರಾಗಿ, ನಿರ್ದೇಶಕರಾಗಿ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಎಲ್ಲಾ ಸಾಧನೆಯನ್ನು ಗುರುತಿಸಿ ರೈತ ಸೌರಭ, ಚಾವಣಿಮಣೆ, ಸಾಧನ ಪುರಸ್ಕಾರ, ಯುವ ಕೃಷಿಕ, ವಿವೇಕ ಕಾಯಕ ರತ್ನ ಪ್ರಶಸ್ತಿ, ಕೃಷಿ ಸಾಧಕ, ಬೆಳುವಾಯಿ ಸೊಸೈಟಿಯಿಂದ ಕೃಷಿ ಸಾಧಕ, ಕಾರ್ಯ ವಿವೇಕ ಹೀಗೆ ಹತ್ತು ಹಲವಾರು ಪ್ರಶಸ್ತಿಯನ್ನು ಪಡೆದಿದ್ದಾರೆ.
ಉನ್ನತ ಶಿಕ್ಷಣ ಪಡೆದು ಅರ್ಥಪೂರ್ಣ ಯಶಸ್ಸು ಕಂಡರೆ ಮಾತ್ರ ಶಿಕ್ಷಣಕ್ಕೆ ಸಿಕ್ಕ ಜಯ. ಹಾಗೆಯೇ ನಾಗರಾಜ್ ಅವರು ಕೂಡ ಎಲ್ಲಾ ರೀತಿಯ ಕೃಷಿಯಲ್ಲಿ ಯಶಸ್ಸು ಕಂಡಿದ್ದು, ಇನ್ನಷ್ಟು ಲಾಭ ಗಳಿಸುವಂತಾಗಿ ಹಾಗೂ ಇವರು ಇಂದಿನ ಯುವ ಪೀಳಿಗೆಗೆ ಉತ್ತಮ ಮಾದರಿ ಎಂದು ಹೇಳಬಹುದು.
“ ಸರಿಯಾದ ಪ್ಲಾನಿಂಗ್ನಿಂದ ಲಾಭ ಖಂಡಿತ. ರೈತ ಸ್ವಾವಲಂಬಿ, ತನ್ನ ಇಚ್ಛೆಯಂತೆ ಕೆಲಸ ಮಾಡುವ ಸ್ವಾತಂತ್ರ್ಯ ಇದೆ. ಐಟಿ ಕಂಪೆನಿಗಳಲ್ಲಿ ಅಥವಾ ಸರ್ಕಾರಿ ಕೆಸದಲ್ಲಿ ನಮಗೆ ಬೇಕಾದ ಸಮಯದಲ್ಲಿ ರಜೆ ಸಿಗುವುದಿಲ್ಲ. ಅದೇ ಸ್ವಂತ ಕೃಷಿಯಲ್ಲಿ ನಮ್ಮಿಚ್ಛೆಯಂತೆ ಸುಲಭವಾಗಿ ರಜೆ ಮಾಡಬಹುದು” -ನಾಗರಾಜ್ ಶೆಟ್ಟಿ
-ಅನ್ವಯ ಮೂಡುಬಿದಿರೆ

