ಬಂಟ್ವಾಳ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ಕ್ಷೇತ್ರ ಸಮಿತಿಯ ಮಹಾಸಭೆ ಮತ್ತು ವಲಯದ ಹಿರಿಯ ಸದಸ್ಯರಿಗೆ ಅಭಿನಂದನೆ ಬಿ.ಸಿ.ರೋಡಿನ ಲಯನ್ಸ್ ಸೇವಾಮಂದಿರದಲ್ಲಿ ನಡೆಯಿತು. ಶಾಸಕ ರಾಜೇಶ್ ನಾೈಕ್ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಮಾನವನ ನಾಗರಿಕತೆ ಆರಂಭವಾದಂದಿನಿಂದ ಟೈಲರ್ ವೃತ್ತಿಯೂ ಆರಂಭಗೊಂಡಿರಬಹುದು ಇಂದು ತಾಂತ್ರಿಕ ಕ್ಷೇತ್ರದ ಅಭಿವೃದ್ದಿಯೊಂದಿಗೆ ಟೈಲರ್ ವೃತ್ತಿಯೂ ಮುಂದುವರೆಯುತ್ತಿದ್ದು ಈ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ ಎಂದು ಅವರು ತಿಳಿಸಿದರು.
ಶಾಸಕನಾಗಿ ತನ್ನ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ, ನನ್ನ ಈ ಪ್ರಯತ್ನದಲ್ಲಿ ಎಂದೂ ಹಿಂದೆ ಬೀಳುವುದಿಲ್ಲ ಎಂದು ತಿಳಿಸಿದರು. ಕೆಎಸ್ಟಿಎ ರಾಜಾಧ್ಯಕ್ಷ ಆನಂದ ಕೆ.ಎಸ್. ಪ್ರಾಸ್ತವಿಕವಾಗಿ ಮಾತನಾಡಿ ಜನಪ್ರತಿನಿಧಿಗಳು ಟೈಲರ್ ಗಳ ಎಲ್ಲಾ ಬೇಡಿಕೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿ ನ್ಯಾಯ ಒದಗಿಸಿ ಕೊಡುವ ಪ್ರಯತ್ನ ಮಾಡಬೇಕು, ನಾವು ಸರಕಾರದಲ್ಲಿ ಭಿಕ್ಷೆ ಬೇಡುತ್ತಿಲ್ಲ, ಸಂವಿಧಾನಬದ್ದ ಹಕ್ಕನ್ನು ಕೇಳುತ್ತಿದ್ದೇವೆ ಎಂದರು. ತಾಲೂಕು ಸಮಿತಿ ಅಧ್ಯಕ್ಷ ಈಶ್ವರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಪುರಂದರ ಹೆಗ್ಡೆ, ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ವಸಂತ, ಜಿಲ್ಲಾ ಅಧ್ಯಕ್ಷ ಪ್ರಜ್ವಲ್ ಕುಮಾರ, ರಾಜ್ಯ ಕಾರ್ಯದರ್ಶಿ ಅಶ್ರಫುನ್ನೀಸ, ಉಪಾಧ್ಯಕ್ಷೆ ವಿದ್ಯಾಶೆಟ್ಟಿ ಜಿ.ಆನಂದ ಹಾಜರಿದ್ದರು. ಶಾಸಕ ರಾಜೇಶ್ ನಾೈಕ್, ತಹಶೀಲ್ದಾರ್ ಪುರಂದರ ಹೆಗ್ಡೆ ಸಹಿತ ಏಳು ವಲಯಗಳ ಹಿರಿಯ ಟೈಲರ್ಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿವಿಧ ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಲಾಯಿತು.
