ಬಂಟ್ವಾಳ: ಅಕ್ರಮವಾಗಿ ಜೆಸಿಬಿ ಮೂಲಕ ಟಿಪ್ಪರ್ಗಳಿಗೆ ಮರಳು ತುಂಬಿಸುತ್ತಿದ್ದ ವೇಳೆ ಎಎಸ್ಪಿ ಋಷಿಕೇಶ್ ಸೋನವಾಣೆ ನೇತೃತ್ವದ ಪೊಲೀಸರ ತಂಡವು ದಾಳಿ ನಡೆಸಿ ರೂ 58ಲಕ್ಷ ಮೌಲ್ಯದ ಜೆಸಿಬಿ, ಟಿಪ್ಪರ್, ನಾಡದೋಣಿ ಮತ್ತಿತರ ಸಾಮಾಗ್ರಿ ವಶಪಡಿಸಿಕೊಂಡ ಘಟನೆ ಇಲ್ಲಿನ ಮುಲಾರಪಟ್ನ ಸಮೀಪದ ಬಡಗಬೆಳ್ಳೂರು ಫಲ್ಗುಣಿ ನದಿ ತೀರದಲ್ಲಿ ಭಾನುವಾರ ನಡೆದಿದೆ.

ಫಲ್ಗುಣಿ ನದಿ ತೀರದಲ್ಲಿ ಕಳೆದ ಹಲವು ದಿನಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಎಎಸ್ಪಿ ಋಷಿಕೇಶ್ ಸೋನವಾಣೆ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರ ತಂಡವು ಭಾನುವಾರ ದಿಢೀರ್ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ ಪೊಲೀಸರನ್ನು ಕಂಡು ಮರಳು ಕಾರ್ಮಿಕರು ಮತ್ತು ಟಿಪ್ಪರ್ ಚಾಲಕರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಸುಮಾರು ರೂ 58ಲಕ್ಷ ಮೌಲ್ಯದ ಹಿಟಾಚಿ, ಎರಡು ಕಬ್ಬಿಣದ ನಾಡದೋಣಿ, 9 ಟಿಪ್ಪರ್ ಲಾರಿ ವಶಪಡಿಸಿಕೊಂಡು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್, ಎಸೈ ಪ್ರಸನ್ನ, ಸಿಬ್ಬಂದಿ ವಿಶ್ವನಾಥ ರೈ, ಸುರೇಶ್, ಜಯರಾಮ, ಜನಾರ್ದನ, ಸುಬ್ರಹ್ಮಣ್ಯ, ಕುಮಾರ್, ಪುನೀತ್, ಮನೋಜ್ ಮತ್ತಿತರರು ಭಾಗವಹಿಸಿದ್ದರು.
