ಮೂಡಬಿದಿರೆ: ರಾಷ್ಟ್ರೀಯ ಜೇನು ಮಂಡಳಿಯ ಪ್ರಾಯೋಜಕತ್ವದಲ್ಲಿ ಸಹರಾ ಗ್ರಾಮೋದ್ಯೋಗ ಸಂಸ್ಥಾನ ಸಂಸ್ಥೆಯು ಮೂಡುಬಿದಿರೆಯ ಗ್ರಾಮೀಣ ಪ್ರದೇಶಗಳಲ್ಲಿ ಜೇನು ಸಾಕಣೆಯ ಕುರಿತು ಒಂದು ವಾರದ ಕಾಲ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಹಿರಿಯ ಆಹಾರ ವಿಜ್ಞಾನಿ ಎ. ಎ. ಫಝಲ್ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಕೃಷಿಕರು ಸಾಂಪ್ರದಾಯಿಕ ಕೃಷಿಯ ಜತೆಗೆ ಇಂತಹ ವಾಣಿಜ್ಯ ಕೃಷಿಯತ್ತ ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ಮೂಲಕ ಕೃಷಿಕರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ.
ಜೇನು ಉತ್ಪಾದನೆಯಲ್ಲಿ ಹಿಂದುಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಔಷಧಿ, ಆಹಾರಗಳಲ್ಲಿ ಜೇನು ಪ್ರಮುಖ ಪಾತ್ರ ವಹಿಸುವುದರಿಂದ ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಮುಂದಿನ 4 ವರ್ಷಗಳಲ್ಲಿ ಜೇನು ಉತ್ಪಾದನೆ ದ್ವಿಗುಣಗೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮೂಡುಬಿದಿರೆ ಪರಿಸರದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಆಸಕ್ತ ಕೃಷಿಕರಿಗೆ ವೈಜ್ಞಾನಿಕ ವಿಧಾನದಲ್ಲಿ ಜೇನು ಸಾಕಣೆ ನಡೆಸುವ ಬಗ್ಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲಾಯಿತು. ಸಹರಾ ಗ್ರಾಮೋದ್ಯೋಗ ಸಂಸ್ಥಾನ ಸಂಸ್ಥೆಯ ಅಧ್ಯಕ್ಷ ಯೋಗೇಂದ್ರ ಪುನಿಯಾ ಅವರು ಕೃಷಿಕರಿಗೆ ಮಾಹಿತಿ, ತರಬೇತಿಯನ್ನು ನೀಡಿದರು.
ಸಹರಾ ಗ್ರಾಮೋದ್ಯೋಗ ಸಂಸ್ಥಾನ ಸಂಸ್ಥೆಯ ಯೋಜನಾ ಮುಖ್ಯಸ್ಥ ಕಪಿಲ್, ತರಬೇತುದಾರರಾದ ಎನ್. ವಿ. ಫೌಲೋಸ್, ಸ್ಥಳೀಯ ತರಬೇತುದಾರರಾದ ಅಪೂರ್ವ ಕೃಷಿಕರಿಗೆ ಮಾಹಿತಿ, ತರಬೇತಿ ನೀಡಿದರು.
ಮಂಗಳೂರಿನ ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜು ಆವರಣದಲ್ಲಿ ಜೇನು ಕೃಷಿಯ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆಸಕ್ತ ಕೃಷಿಕರಿಗೆ ಜೇನು ಸಾಕಣೆ ತರಬೇತಿಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ವಿಜ್ಞಾನಿ ಎ. ಎ. ಫಝಲ್ ಅವರನ್ನು ಸನ್ಮಾನಿಸಲಾಯಿತು. ಸಹರಾ ಗ್ರಾಮೋದ್ಯೋಗ ಸಂಸ್ಥಾನ ಸಂಸ್ಥೆಯ ಅಧ್ಯಕ್ಷ ಯೋಗೇಂದ್ರ ಪುನಿಯಾ ಅವರು ಎ. ಎ. ಫಝಲ್ ಅವರನ್ನು ಸನ್ಮಾನಿಸಿದರು.

