ಮೂಡುಬಿದಿರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಆಶ್ರಯದಲ್ಲಿ 21 ವರ್ಷದ ಯಕ್ಷೋಚ್ಚಯದ ಅಂಗವಾಗಿ ತುಳು ಆಟದ ಪಂತೊ 2018 ವೃತ್ತಿಪರ ಮೇಳ ತಿರುಗಾಟ ಕಲಾವಿದರಿಂದ ತುಳು ಯಕ್ಷಗಾನ ಸ್ಪರ್ಧೆ ಅ.5ರಿಂದ 7ರವರೆಗೆ ಅರಮನೆಬಾಗಿಲು ಪದ್ಮಾವತಿ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಮಂಡಳಿಯ ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅ.5ರಂದು ಮಧ್ಯಾಹ್ನ 3.30ಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ.ಕೆ ಚಿನ್ನಪ್ಪ ಗೌಡ ಅಧ್ಯಕ್ಷತೆವಹಿಸಲಿದ್ದಾರೆ.
ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇ.ಮೂ ಕಮಲಾದೇವಿ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಉದ್ಯಮಿ ಶ್ರೀಕಾಂತ್ ರಾವ್ ನಂದಳಿಕೆ, ಉದಯ ಶೆಟ್ಟಿ ಮುನಿಯಾಲು ಮುಖ್ಯ ಅತಿಥಿಯಾಗಿರುವರು.

ಬಳೀಕ ಕಲಾ ವಿಮರ್ಶಕ ಕೆ.ಎಲ್ ಕುಂಡಂತಾಯ ಸಂಪಾದಿಸಿದ `ಯಕ್ಷದೇವ ವಿಂಶತಿ ವಿಭವ’ ಪುಸ್ತಕವನ್ನು ಪಾವಂಜೆಯ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಕಲಾಪೋಷಕ ವೇದಿಕೆಯ ಅಧ್ಯಕ್ಷ ಶಶೀಂದ್ರ ಕುಮಾರ್ ಬಿಡುಗಡೆಗೊಳಿಸುವರು. ವಿಷ್ಣುಶರ್ಮ ಪಣಕಜೆ ಅರ್ಥ ಬರೆದಿರುವ ಶ್ರೀದೇವಿ ಮಹಾತ್ಮೆ ಅರ್ಥಸಹಿತ ಪ್ರಸಂಗ ಪುಸ್ತಕವನ್ನು ಬಲಿಪ ನಾರಾಯಣ ಭಾಗವತ ಬಿಡುಗೊಳಿಸಲಿರುವರು.
ಅ.6ರಂದು 5ಗಂಟೆಗೆ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಉದ್ಯಮಿ ಭಾಸ್ಕರ ಕೋಟ್ಯಾನ್, ಸುಹಾಸ್ ಹೆಗ್ಡೆ ನಂದಳಿಕೆ, ಮಂಜುನಾಥ್ ಹೆಬ್ಬಾರ್, ಶಶಿಧರ ರಾವ್ ಮುಖ್ಯ ಅತಿಥಿಗಳಾಗಿರುವರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್ ಸಾಮಗಾರವರು `ಶ್ರೀಯಕ್ಷದೇವ ಅಮೇರಿಕಾದಲ್ಲಿ ಕಳೆದ ದಿನಗಳು’ ವಿಷಯದ ಕುರಿತು ಮಾತನಾಡಲಿದ್ದಾರೆ. ಕಲಾವಿದ ಲಾಡಿ ದಿ.ಕೃಷ್ಣ ಶೆಟ್ಟಿ, ದಿ.ವನಜಾಕ್ಷಿ ಅಮ್ಮ ಮೂಡುಬಿದಿರೆ, ಕಲಾವಿದ, ಅರ್ಚಕ ದಿ. ಪದ್ಮನಾಭ ತಂತ್ರಿ ನಾರಾವಿ. ಕಲಾವಿದ ದಿ.ದಾಮೋದರ ಶೆಟ್ಟಿಗಾರ್ ಅವರ ಸಂಸ್ಮರಣೆಯನ್ನು ಮಾಡಲಾಗುವುದು ಎಂದರು.
ಅರುವ, ಬಂಗಾಡಿಗೆ ಯಕ್ಷ ಶ್ರೀಯಕ್ಷದೇವ ಪ್ರಶಸ್ತಿ:
ಅ.7ರಂದು ಸಾಯಂಕಾಲ 6.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ನಿಟ್ಟೆ ವಿವಿ ಕುಲಪತಿ ಡಾ.ವಿನಯ ಹೆಗ್ಡೆ ಅಧ್ಯಕ್ಷತೆವಹಿಸಲಿದ್ದಾರೆ. ಅರುವ ಕೊರಗಪ್ಪ ರೈ, ಅನಂತರಾಮ ಬಂಗಾಡಿ ಅವರಿಗೆ ಶ್ರೀಯಕ್ಷದೇವ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ನೀಡಿ ಗೌರವಿಸಲಿದ್ದಾರೆ. ಸಚಿವ ಯು.ಟಿ ಖಾದರ್, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಎಸ್ಕೆಎಫ್ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮಕೃಷ್ಣ ಆಚಾರ್ಯ, ಅಗರಿ ಸಮೂಹ ಸಂಸ್ಥೆಗಳ ಮಾಲಕ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿರುವರು.
ಯಕ್ಷಗಾನ ವೈವಿಧ್ಯ, ತುಳು ಯಕ್ಷಗಾನ ಸ್ಪರ್ಧೆ:
ಅಕ್ಟೋಬರ್ 5ರಂದು ಮಧ್ಯಾಹ್ನ 1ರಿಂದ ಸಂಯಮಂ ಕೋಟೇಶ್ವರ ತಂಡದಿಂದ `ಭಕ್ತ ರುಕ್ಮಾಂಗದ’ ತಾಳ ಮದ್ದಲೆ, ಸಾಯಂಕಾಲ 5 ಗಂಟೆಯ ಬಳಿಕ ವಿವಿಧ ಯಕ್ಷಗಾನ ಮಂಡಳಿಗಳಿಂದ `ಅಬ್ಬರದ ಬಬ್ಬರ್ಯೆ’, `ಮಾಯಕದ ಬಿನ್ನೆದಿ’ ತುಳು ಯಕ್ಷಗಾನ ಸ್ಪರ್ಧೆ ನಡೆಯಲಿದೆ. ಅ.6ರಂದು ಮಧ್ಯಾಹ್ನ 3 ಗಂಟೆಯಿಂದ `ನಾಗತಂಬಿಲ’, `ಬಾಲೆಮಾನಿ ಮಾಯಂದಾಲ್’, `ಕಾಡಮಂಜರಿ’ ತುಳು ಯಕ್ಷಗಾನ ಸ್ಪರ್ಧೆಯ ಪ್ರದರ್ಶನ ನಡೆಯಲಿದೆ. ಅ.7ರಂದು ಬೆಳಗ್ಗೆ 11.15ರಿಂದ `ಕೋಡ್ದಬ್ಬು ಬಾರಗ’, `ಸಿರಿಕೃಷ್ಣ ಚಂದಪಾಲೆ’, `ಕುಡಿಯನ ಕಣ್ಣ್’ ತುಳು ಯಕ್ಷಗಾನ, ಸ್ಪರ್ಧಾ ತಂಡಗಳಿಂದ ಪ್ರದರ್ಶನಗೊಳ್ಳಲಿದೆ ಎಂದು ದೇವಾನಂದ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಕಾರ್ಯದರ್ಶಿ ರವಿಪ್ರಸಾದ್ ಕೆ.ಶೆಟ್ಟಿ ಉಪಸ್ಥಿತರಿದ್ದರು.
