ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಹಿರಿಯ ಸಾಹಿತಿ, ಸಂಘಟಕ ಹಾಗೂ ತುಳು ಲಿಪಿ ಶಿಕ್ಷಕರಾದ ಬಿ.ತಮ್ಮಯ ಅವರಿಗೆ ಅಕಾಡೆಮಿಯ ತುಳುಭವನದ “ಸಿರಿ ಚಾವಡಿಯಲ್ಲಿ “ಚಾವಡಿ ತಮ್ಮನ’ ಪ್ರದಾನ ಮಾಡಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸನ್ಮಾನಿಸಿ ಮಾತನಾಡಿ, ಬಿ.ತಮ್ಮಯ ಅವರು ಸಾಹಿತಿ, ಸಂಘಟಕರರಾಗಿ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಜತೆಯಲ್ಲಿ ಅವರು ಅಪ್ಪಟ ಮಾನವತಾವಾದಿಯಾಗಿ ಪ್ರೀತಿ, ಭಾಂದವ್ಯದ ಸಮಾಜ ಕಟ್ಟುವಲ್ಲಿಯೂ ಶ್ರಮಿಸಿದವರು. ಈ ಇಳಿವಯಸ್ಸಿನಲ್ಲೂ ಸಾಹಿತ್ಯ, ಸಂಸ್ಕøತಿ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸೇವೆ ಅನುಕರಣೀಯವಾದುದು ಎಂದರು.
ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕಾಡೆಮಿ ವತಿಯಿಂದ ತುಳು ವಿದ್ವಾಂಸರು, ಸಂಶೋಧಕರು, ಸಾಹಿತಿಗಳು, ಕಲಾವಿದರು, ಸಂಘಟಕರನ್ನು ಗುರುತಿಸಿ “ಚಾವಡಿ ತಮ್ಮನ” ಮಾಡಿ ಗೌರವಿಸುವ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಅರ್ಹವಾಗಿಯೇ ಬಿ.ತಮ್ಮಯ ಅವರು ಆಯ್ಕೆಯಾಗಿದ್ದು ಸಾಹಿತ್ಯ ಕ್ಷೇತ್ರದ ಸೇವೆಯ ಜತೆಗೆ ತುಳು ಲಿಪಿಯ ಶಿಕ್ಷಕರಾಗಿಯೂ ತುಳು ಭಾಷಾ ಬೆಳವಣಿಗೆಗೆ ಅವರು ನೀಡಿದ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಟಿ.ಹೆಬ್ಬಾರ್ ಬಿ.ತಮ್ಮಯರ ಬಗ್ಗೆ ಅಭಿನಂದನಾ ಭಾಷಣ ಮಾಡಿ, ತಮ್ಮಯ ಅವರು ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದಾರೆ. ವೃತ್ತಿ ಬದುಕಿನ ನಡುವೆಯೇ ಸಾಹಿತ್ಯ-ಸಾಂಸ್ಕøತಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಅವರು ನಿವೃತ್ತಿಯ ನಂತರವೂ ಸೃಜನಾಶೀಲ ಚಟುವಟಿಕೆಯೊಂದಿಗೆ ಜನಮಾನಸದ ಪ್ರೀತಿ ಗೌರವಾದರಗಳಿಗೆ ಪಾತ್ರರಾದವರು ಎಂದರು.
ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ಡಾ.ವಾಸುದೇವ ಬೆಳ್ಳೆ, ಶಿವಾನಂದ ಕರ್ಕೆರಾ, ಬೆನೆಟ್ ಅಮ್ಮಣ್ಣ, ವಿಜಯಾ ಶೆಟ್ಟಿ ಸಾಲೆತ್ತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸದಸ್ಯ ಸಂಚಾಲಕ ಎ.ಗೋಪಾಲ ಅಂಚನ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ತಾರಾನಾಥ ಗಟ್ಟಿ ಕಾಪಿಕಾಡು ನಿರೂಪಿಸಿ, ಸುಧಾ ನಾಗೇಶ್ ವಂದಿಸಿದರು.

