ಮೂಡುಬಿದಿರೆ: ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಬಿಗಿ ನಿಯಮಾವಳಿಗಳಿಂದಾಗಿ ಕಳೆದ ನಾಲ್ಕುವರ್ಷಗಳಿಂದ ಮನೆ ಕಟ್ಟಲು ಪರವಾನಿಗೆ ದೊರೆಯದೆ ಇಲ್ಲಿನ ಜನರು ಬಹಳ ಸಮಸ್ಯೆಯಾಗುತ್ತಿರುವುದನ್ನು ಮನಗಂಡು ಇದೀಗ ಸತತ ಎರಡು ತಿಂಗಳ ಹೋರಾಟದ ಫಲವಾಗಿ ಮೂಡಬಿದಿರೆಗೆ ಮಂಗಳೂರು ಮುಡಾ ಝೋನಲ್ ರೆಗ್ಯುಲೇಶನ್ ಅನ್ವಯಿಸಲು ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು ಅವಕಾಶ ಕಲ್ಪಿಸಿದ್ದು ಇನ್ನು ಮುಂದೆ ಮೂಡಬಿದಿರೆಯಲ್ಲಿ ಮನೆ ನಿರ್ಮಾಣಕ್ಕೆ ಪರವಾನಿಗೆ ಪಡೆಯಲು ನಿಯಮಗಳನ್ನು ಸರಳಗೊಳಿಸಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮೂಡುಬಿದಿರೆ ಪುರಸಭೆಯಲ್ಲಿ ಕಳೆದ 4 ವರ್ಷಗಳಿಂದ ಮನೆ ಕಟ್ಟಲು ಪರವಾನಿಗೆ ನೀಡದೆ, ಯಾವುದೇ ಕನ್ವರ್ಷನ್ ಸೈಟುಗಳಿಗೆ ಖಾತೆ ನೀಡದೆ ಜನರಿಗೆ ಬಹಳ ತೊಂದರೆಯಾಗಿತ್ತು. ಪುರಸಭೆಗೆ ಒಂದು ಕೋಟಿಗೂ ಮಿಕ್ಕಿ ನಷ್ಟವುಂಟಾಗಿತ್ತು.ನೋಂದಣಿ ಕಚೇರಿಯಲ್ಲಿ ವಹಿವಾಟು ನಡೆಯದೆ, ಸರ್ಕಾರದ ಖಜಾನೆಗೂ ಲಕ್ಷಾಂತರ ರೂ. ನಷ್ಟವುಂಟಾಗಿತ್ತು. ಕಟ್ಟಡ ನಿರ್ಮಾಣ ಕಾಮಗಾರಿಗಳೆಲ್ಲ ಬಿದ್ದು ಹೋಗಿ ಗುತ್ತಿಗೆದಾರರು, ಕಾರ್ಮಿಕರು, ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಈ ಬಗ್ಗೆ ನುರಿತ ವಕೀಲರು, ವಾಸ್ತುತಜ್ಞರೊಂದಿಗೆ ಚರ್ಚಿಸಿದಾಗ `ಮೂಡಾ’ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ತೊಂದರೆಯಾಗಿರುವುದು ತಿಳಿದುಬಂದಿತು. ಈ ಬಗ್ಗೆ ತಾನು ಸೆ. 19ರಂದು ಬೆಂಗಳೂರಿನಲ್ಲಿ ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು, ದ.ಕ. ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಇರುವ ಅಧಿಕಾರಿ ಪೆÇನ್ನುರಾಜ್ ಇವರಿಗೆ ಮನವರಿಕೆ ಮಾಡಿದಾಗ ಅವರು ಸಮಸ್ಯೆಯ ಮೂಲವನ್ನು ತಿಳಿದುಕೊಂಡರು. ಹಾಗೂ ಕೂಡಲೇ ದ.ಕ. ಜಿಲ್ಲಾಧಿಕಾರಿ ಮತ್ತು ಮೂಡಬಿದಿರೆ ನಗರ ಯೋಜನಾ ಪ್ರಾಧಿಕಾರದ ಮುಖ್ಯಸ್ಥ ರಾದ ಸಹಾಯಕ ಆಯುಕ್ತರು ಹಾಗೂ ಕಾರ್ಯದರ್ಶಿಯವರಿಗೆ ಇದುವರೆಗೆ ಮೂಡುಬಿದಿರೆಯಲ್ಲಿ ಅನುಸರಿಸಲಾಗುತ್ತಿರುವ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನಿಯಮಾವಳಿಗಳ ಬದಲಾಗಿ ಮಂಗಳೂರು ಮೂಡಾ ಅಳವಡಿಸಿರುವ ಝೋನಲ್ ರೆಗ್ಯುಲೇಶನ್ ಜಾರಿಗೊಳಿಸಿ , ಮನೆ ಕಟ್ಟಬಯಸುವವರಿಗೆ ಪರವಾನಿಗೆ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಈ ಬಗ್ಗೆ ಈಗಾಗಲೇ ಮೂಡಬಿದಿರೆ ಪುರಸಭೆಗೂ ನಿರ್ದೇಶನ ನೀಡಲಾಗಿದೆ ಎಂದು ಶಾಸಕರು ವಿವರಿಸಿದರು.
ಮೂಡಬಿದಿರೆ ನಗರ ಪ್ರಾಧಿಕಾರಕ್ಕೆ ಮಾಸ್ಟರ್ ಪ್ಲಾನ್ ಮತ್ತು ಝೋನಲ್ ರೆಗ್ಯುಲೇಶನ್ ಆಗುವ ತನಕ ಇಲ್ಲಿಗೆ ಅತಿ ಸಮೀಪವೂ ಭೌಗೋಳಿಕವಾಗಿ ಸಮಾನವೂ ಆಗಿರುವ ಮಂಗಳೂರು ನಗರ ಪಾಧಿಕಾರದ ಝೋನಲ್ ರೆಗ್ಯುಲೇಶನ್ನ್ನು ಮೂಡುಬಿದಿರೆ ನಗರ ಪ್ರಾಧಿಕಾರಕ್ಕೆ ಕೂಡಲೇ ಅಳವಡಿಸುವ ಮೂಲಕ ಇಲ್ಲಿನ ಜನತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಮಾರ್ಗ ತೋರಿರುವುದಕ್ಕಾಗಿ ಶಾಸಕರು ಎಲ್ಲ ಅಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ಲಕ್ಷ್ಮಣ ಪೂಜಾರಿ, ದಿನೇಶ್ ಪೂಜಾರಿ, ಬಿಜೆಪಿ ಮುಖಂಡರಾದ ಮೇಘನಾದ್ ಶೆಟ್ಟಿ, ಗೋಪಾಲ್ ಶೆಟ್ಟಿಗಾರ್, ರಾಜೇಶ್ ಮಲ್ಯ, ಅಶೋಕ ಮಲ್ಯ ಉಪಸ್ಥಿತರಿದ್ದರು.

