ಬಂಟ್ವಾಳ: ಸಪ್ಟೆಂಬರ್ 05: ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ, ಮಹಿಳೆಯರಿಗೆ, ದಲಿತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಡಿ.ಕೆ.ಡಿಸ್ಟ್ರಿಕ್ಟ್ ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟಿಸ್ (ದ.ಕ.ಜಿಲ್ಲಾ ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್ ವೇದಿಕೆ) ಎಂಬ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ನೂತನ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಇತ್ತೀಚೆಗೆ ಬಿ.ಸಿ. ರೋಡಿನಲ್ಲಿ ನಡೆದ ಪ್ರಗತಿಪರರ ಸಭೆಯಲ್ಲಿ ಈ ಫೋರಂ ಸ್ಥಾಪನೆಯಾಗಿದ್ದು, ಫೋರಂನ ಸ್ಥಾಪಕ ಅಧ್ಯಕ್ಷರಾಗಿ ಭಾನುಚಂದ್ರ ಕೃಷ್ಣಾಪುರ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಪ್ಪಕುಂದರ್, ಉಪಾಧ್ಯಕ್ಷರುಗಳಾಗಿ ಬಾಬು ಡಿ.ಕಡೇಶ್ವಾಲ್ಯ, ಪೂರ್ಣಿಮಾ ಎಸ್.ಎಸ್. ಬಂಟ್ವಾಳ, ಸೀತಾರಾಮ ನಾಯ್ಕ್ ಕಕ್ಕೆಪದವು, ರಾಮ ಎಸ್ ತುಂಬೆ, ರಮೇಶ್ ಸಾಲಿಯಾನ್ ಅಳಕೆ ರವರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧ ಜಾತಿ, ಮತದ ಏಳು ಸಾವಿರದ ಒಂಭೈನೂರು ಮಂದಿ ಈ ಫೋರಂನ ಸದಸ್ಯತ್ವ ಹೊಂದಿದ್ದಾರೆ. ಯಾವುದೇ ಜಾತಿ ಮತ ಬೇಧವಿಲ್ಲದೆ ದೌರ್ಜನ್ಯಕ್ಕೊಳಗಾದ ಎಲ್ಲಾ ವರ್ಗದವರ ಪರ ನ್ಯಾಯಕ್ಕಾಗಿ ಶ್ರಮಿಸುವ ಈ ಫೋರಂ ಮಕ್ಕಳ, ಮಹಿಳೆಯರ, ದಲಿತರ, ವಯೋವೃದ್ಧರ ಹಕ್ಕು ರಕ್ಷಣೆಗೆ ಕಾರ್ಯೋನ್ಮುಖವಾಗಲಿದೆ. ಮಾತ್ರವಲ್ಲ ಯಾವುದೇ ರೀತಿಯ ಸಂತ್ರಸ್ತರಿಗೆ ಉಚಿತವಾಗಿ ಕಾನೂನು ಸಲಹೆ ನೀಡುವ ಜೊತೆಗೆ ಆದ್ಯತೆಯ ನೆಲೆಯಲ್ಲಿ ಅಶಕ್ತ ಸಂತ್ರಸ್ತರಿಗೆ ಉಚಿತ ಕಾನೂನು ನೆರವನ್ನು ಕೂಡಾ ಒದಗಿಸಲಿದೆ.ಎಂದು ಪೋರಂನ ಸ್ಥಾಪಕ ಅಧ್ಯಕ್ಷ ಭಾನುಚಂದ್ರ ತಿಳಿಸಿದ್ದಾರೆ.
