ಮೂಡುಬಿದಿರೆ: ಇಲ್ಲಿನ ಕೋರ್ಪುಸ್ ಕ್ರೀಸ್ತಿ ಚರ್ಚ್ ಸಭಾಂಗಣದಲ್ಲಿ ಮೂಡುಬಿದಿರೆ ವಲಯ ಕಥೋಲಿಕ್ ಸಭಾ ವತಿಯಿಂದ ರವಿವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಯಿತು.
ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ವಂದನೀಯ ಗುರು ಪಾವ್ಲ್ ಸಿಕ್ವೇರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಅಭಿವೃದ್ಧಿಯಾಗುವಲ್ಲಿ ಪ್ರತಿಭಾವಂತರ ಕೊಡುಗೆ ದೊಡ್ಡದು ಎಂದರು.
ಮೂಡುಬಿದಿರೆ ವಲಯ ಕಥೋಲಿಕ್ ಸಭಾ ಅಧ್ಯಕ್ಷ ಹೆರಾಲ್ಡ್ ರೇಗೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊಕ್ರಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನೋರ್ಬರ್ಟ್ ಮಾರ್ಟಿಸ್ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಿಂತ ಅಂಕ ಗಳಿಸುವುದಕ್ಕೆ ಒತ್ತು ನೀಡುತ್ತಿರುವ ಪೋಷಕರ ಪ್ರತಿಷ್ಠೆಯಿಂದಾಗಿ ಮಕ್ಕಳ ಮೇಲೆ ವಿಪರೀತ ಒತ್ತಡ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ತಮಮ್ ಆಸಕ್ತಿಯ ಕ್ಷೇತ್ರ ಯಾವುದೆಂದು ನಿರ್ಧರಿಸಲು ಗೊಂದಲ ಉಂಟಾಗುತ್ತದೆ. ಪೋಷಕರ ಸ್ಪರ್ಧಾತ್ಮಕ ಮನೋಭಾವದಿಂದಾಗಿ ಮಕ್ಕಳು ಹಿಂಡಲ್ಪಡುತ್ತಿದ್ದು, ಪರಿಣಾಮವಾಗಿ ಮಕ್ಕಳ ಆತ್ಮಹತ್ಯಾ ಪ್ರಕರಣಗಳು ಹೆಚ್ಚುತ್ತಿವೆ.
ಮಕ್ಕಳನ್ನು ಪರಸ್ಪರ ಇತರರಿಗೆ ಹೋಲಿಕೆ ಮಾಡದೆ ಅವರನ್ನು ಉತ್ತೇಜಿಸುವುದು ಹಾಗೂ ಮಕ್ಕಳ ಮೇಲೆ ಗಮನ ಇಡುವುದರಲ್ಲಿ, ಒತ್ತಡ ಹೇರುವುದರಲ್ಲಿ ಇರುವ ವ್ಯತ್ಯಾಸವನ್ನು ಅರಿತುಕೊಳ್ಳುವುದು ಇಂದಿನ ಅಗತ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ಸಿಪ್ರಿಯನ್ ಪಿಂಟೊ, ಕೊಕ್ರಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕವಾದ ನೋರ್ಬರ್ಟ್ ಮಾರ್ಟಿಸ್, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ರೋಯ್ಸನ್ ಅನಿಲ್ ಸಿಕ್ವೇರಾ ಸಿದ್ಧಕಟ್ಟೆ, ಐಸಿವೈಎಮ್ ಕೇಂದ್ರೀಯ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಜೈಸನ್ ಪಿರೇರಾ ಶಿರ್ತಾಡಿ, ಕಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ರೋಲ್ಫಿ ಡಿಕೋಸ್ತಾ, ಎಂಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಆ್ಯಂಡ್ರು ಡಿಸೋಜಾ ಪಾಲಡ್ಕ ಹಾಗೂ ಕಳೆದ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಮೂಡುಬಿದಿರೆ ವಲಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಡಿಕೋಸ್ತಾ ಸನ್ಮಾನಿತರ ವಿವರ ವಾಚಿಸಿದರು. ವಲಯ ಕಾರ್ಯದರ್ಶಿ ವಿಲ್ಸನ್ ಡಿಸೋಜಾ ಸಾವೆರಪುರ ವಂದಿಸಿದರು.
