ಕುಪ್ಪೆಪದವು: ಕಲ್ಲಾಡಿ ರಸ್ತೆಯ ಅಂಚಿನಲ್ಲಿರುವ ವಿದ್ಯುತ್ ಕಂಬಿಗಳಿಂದಾಗಿ ವಾಹನಗಳಿಗೆ ತೊಂದರೆಯಾಗುತ್ತಿದ್ದು, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕೆಂದು ಇತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಮೆಸ್ಕಾಂನ ಜನಸಂಪರ್ಕ ಸಭೆಯಲ್ಲೂ ಒತ್ತಾಯ ಕೇಳಿ ಬಂದಿತ್ತು. ಒಂದು ವರ್ಷದ ಹಿಂದೆ ಕುಪ್ಪೆ[ದವು-ಕಲ್ಲಾಡಿ-ಇರುವೈಲುರಸ್ತೆ ಅಗಲೀಕರಣವಾಗಿತ್ತು. ರಸ್ತೆ ಅಗಲೀಕರಣ ಮಾಡಲು ರಸ್ತೆಯಿಂದ ದೂರ ಇದ್ದ ವಿದ್ಯುತ್ ಕಂಬಗಳು ರಸ್ತೆ ಅಗಲೀಕರಣಗೊಂಡ ಪರಿಣಾಮ ಡಾಮಾರು ರಸ್ತೆಯ ಅಂಚಿನಲ್ಲಿ ಉಳಿದುಕೊಂಡಿವೆ.

ಈ ಕಂಬಗಳು ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಕಳೆದೆರಡು ತಿಂಗಳ ಹಿಂದೆ ಕುಪ್ಪೆಪದವಿನ ಕಾವೇರಿ ಶಾಲೆಯ ಬಳಿ ರಸ್ತೆ ಅಂಚಿನಲ್ಲಿರುವ ವಿದ್ಯುತ್ ಕಂಬಕ್ಕೆ ಕಾರೊಂದು ಗುದ್ದಿ ಅಪಘಾತ ಸಂಭವಿಸಿದೆ. ಈ ಹಿಂದೆಯೂ ಹಲವು ಅಪಘಾತಗಳಾಗಿವೆ. ವಿದ್ಯುತ್ ಕಂಬದ ಹಾನಿಗಾಗಿಅಪಘಾತ ನಡೆಸಿದವರೇ ದುರಸ್ತಿಯ ಮೊತ್ತವನ್ನು ಮೆಸ್ಕಾಂಗೆ ಪಾವತಿಸಬೇಕಾಗಿದೆ. ಕಾಡಕ್ಕೇರಿಯಲ್ಲಿ ನಾರಾಯಣ ಗುರುಗಳ ಗುಡಿಯ ಮುಂಭಾಗದಲ್ಲಿರುವ ವಿದ್ಯುತ್ ಕಂಬವು ಡಾಮಾರು ರಸ್ತೆಗೆ ತಾಗಿಕೊಂಡಿದ್ದು, ಇನ್ನೊಂದು ಭಾಗದ ಗುಡಿ ಇರುವುದರಿಂದ ಮತ್ತು ಇಲ್ಲಿ ರಸ್ತೆಯೂ ತಿರುವಾಗಿರುವುದರಿಂದ ಅತೀ ಅಪಯಕಾರಿಯಾಗಿದೆ. ವಾಹನಗಳು ಎದುರು ಬದುರಾದರೆ ಜಾಗ ಬಿಟ್ಟು ಕೊಡಲು ಅವಕಾಶವೆ ಇಲ್ಲದಂತಾಗಿದೆ. ಅಚಾನಕ್ ಆಗಿ ವಾಹನ ವಿದ್ಯುತ್ ಕಂಬಕ್ಕೆ ತಗುಲಿ ಕಂಬಕ್ಕೆ ಹಾನಿಯಾದರೆ ಮೆಸ್ಕಾಂಗೆ ದಂಡ ಕಟ್ಟುವ ಅನಿವಾರ್ಯತೆ ಎದುರಾಗುತ್ತದೆ.

ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೇ ಬಿಟ್ಟಿರುವುದು ತಪ್ಪಲ್ಲವೇ? ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಜವಾಬ್ದಾರಿ ನಮ್ಮದಲ್ಲ ಅದು ಪಿಡಬ್ಲ್ಯೂಡಿ ಇಲಾಖೆಯವರದ್ದು ಎಂದು ಮೆಸ್ಕಾಂನವರು ಕಂಬಗಳನ್ನು ಸ್ಥಳಾಂತರದೇ, ಇರುವುದು ಅನಾಹುತಗಳಿಗೆ ಎಡೆ ಮಾಡಿ ಕೊಡುತ್ತಿದೆ. ‘ಕೆಲವು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗಿದೆ ಇನ್ನುಳಿದಿರುವ ಕೆಲವು ಕಂಬಗಳನ್ನು ಶೀಘ್ರದಲ್ಲಿಯೇ ಸ್ಥಳಾಂತರಿಸಲಾಗುವುದು ಎಂದು ಪಿಡಬ್ಲ್ಯೂಡಿಯವರು ಹೇಳುತ್ತಾರೆ.ರಸ್ತೆಯಂಚಿನಲ್ಲಿರುವ ಇಂತಹ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕೆಂದು ನಾಗಿರಿಕರ ಆಗ್ರಹವಾಗಿದೆ.
