ಮೂಡುಬಿದಿರೆ: “ನಮ್ಮ ಬದುಕಲ್ಲಿ ಎಲ್ಲವೂ ಪವಾಡವಾಗಬೇಕು ಎಂದು ನಾವು ತಿಳಿಯಬಾರದು, ಮಾಡುವ ಕಾರ್ಯವನ್ನೇ ಪವಾಡದಂತೆ ಮಾಡಬೇಕು. ನಮ್ಮ ಕರ್ತವ್ಯ, ಕರ್ಮಯೋಗದಿಂದ ಸಿಗುವ ಪ್ರತಿಫಲವೇ ಪವಾಡ. ಇದಕ್ಕೆ ಸಾಕ್ಷಿ ಮಿಜಾರುಗುತ್ತು ಆನಂದ ಆಳ್ವ” ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ಶತಾಯುಷಿ ಮಿಜಾರು ಗುತ್ತು ಆನಂದ ಆಳ್ವರ ಶತ ಸಂಭ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತುಳುನಾಡಿನ ಸಂಸ್ಕøತಿಯನ್ನು ಪ್ರೀತಿಸಿ, ಬೆಳೆಸಿದ ಆನಂದ ಆಳ್ವ ಮಣ್ಣಿನ ಮಗ. ತನ್ನ ಜೀವನದುದ್ದಕ್ಕೂ ಮುಖ್ಯವಾಗಿ ಕೃಷಿಯನ್ನೇ ಅವಲಂಬಿಸಿದ ಇವರು ಜಾನುವಾರು ಸಾಕಾಣಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರು. ದೀರ್ಘಾಯುಷ್ಯದ ರಹಸ್ಯ ಅಂತರಂಗದ ಚೈತನ್ಯ, ನಿರ್ಭಿಡತೆ, ಮುಕ್ತವಾದ ಮನಸ್ಸು ಮತ್ತು ಆತ್ಮ ಸ್ಥೈರ್ಯ ಮುಖ್ಯ. ಈ ಎಲ್ಲಾ ಗುಣಗಳುಆನಂದ ಆಳ್ವರಲ್ಲಿ ನೆಲೆಗೊಂಡಿವೆ ಎಂದು ಆಳ್ವರ ಸಜ್ಜನಿಕೆಯ ಜೀವನವನ್ನು ಕೊಂಡಾಡಿದರು.
ಆನಂದ ಆಳ್ವರವರ ಸಂಪತ್ತನ್ನು ನಾವು ಹಣದಿಂದ ಅಳೆಯಲು ಸಾಧ್ಯವಿಲ್ಲ. ಅವರ ಮಕ್ಕಳ ಸಾಧನೆಯಲ್ಲಿ ಕಾಣಬಹುದು. ಜೀವನದಲ್ಲಿ ಬರುವ ಕಷ್ಟಗಳನ್ನು ಮೆಟ್ಟಿ ನಿಂತು ಮುನ್ನುಗುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಿದರು. ಅವರ ಈ ಶ್ರೇಷ್ಠ ವ್ಯಕ್ತಿತ್ವಕ್ಕೆ ದೇವರು ಅಯುಷ್ಯ, ಆರೋಗ್ಯ ನೀಡಲಿ ಎಂದು ಶುಭಾರ್ಶೀವಾದ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿಟ್ಟೆ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎನ್ . ವಿನಯ್ಹೆಗ್ಡೆ ಮಾತನಾಡಿ, ಜೀವನದಲ್ಲಿ ನಾನು ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆದರೆ ಇಂತಹ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೂ ನನ್ನ ಪುಣ್ಯ. ಜೀವನದಲ್ಲಿ ಏರುಪೇರು ಬಂದಾಗ ಧೃತಿಗೆಡದಂತೆ ಮಕ್ಕಳನ್ನು ಬೆಳೆಸಿದ ಇವರು ಇಂದಿನ ಜನತೆಗೆ ಆದರ್ಶ ವ್ಯಕ್ತಿ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಪ್ರಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿ, ತಂದೆಯೊಂದಿಗೆ 66 ವರ್ಷದ ಒಡನಾಟದಲ್ಲಿ ಅವರು ನಮಗೆ ಮಾರ್ಗದರ್ಶಕರಾಗಿದ್ದಾರೆ. ಸತ್ಯದಿಂದ ಬಾಳಬೇಕು ಎಂದು ಹೇಳಿಕೊಟ್ಟಿದ್ದಾರೆ. ಜೀವನದ ಸುಖದುಃಖಗಳನಗನ್ನು ಸಮಾನವಾಗಿ ಸ್ವೀಕರಿಸುವಂತೆ ಆತ್ಮಸ್ಥೈರ್ಯ ನೀಡಿದ್ದಾರೆ ಎಂದು ಹೇಳಿದರು.
ಹುಟ್ಟುಹಬ್ಬವನ್ನು ಪೂರ್ಣ ಕುಂಭದೊಂದಿಗೆ ಆನಂದ ಆಳ್ವರಿಗೆ ಸ್ವಾಗತ ನೀಡಲಾಯಿತು. ನೂರು ಬತ್ತಿ ಇರುವ ದೀಪ ಪ್ರಜ್ವಲನೆ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು. ವೀರೇಂದ್ರ ಹೆಗ್ಗಡೆ ಮುಂತಾದ ಗಣ್ಯರಿಂದ ಆನಂದ ಆಳ್ವರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದರು. ಬಂಧು ಬಳಗದಿಂದ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮೂಡಬಿದಿರೆ ಶಾಸಕ ಉಮಾನಾಥ್ ಕೊಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
