ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಸಾರ್ವಜನಿಕ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ 2018-19 ರ ಸಾಲಿನ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಚದುರಂಗ ಸ್ಪರ್ಧೆಯು ಆ.10 ಶುಕ್ರವಾರದಂದು ನಡೆಯಿತು.

ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯೆಯಾದ ಮಂಜುಳಾ ಮಾಧವ ಮಾವೆ ಮಾತನಾಡಿದ, “ಚದುರಂಗವು ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಆಟ. ಶ್ರದ್ಧೆ, ಏಕಾಗ್ರತೆ, ಸಮಯಪ್ರಜ್ಞೆಯನ್ನು ಮೈಗೂಡಿಸಿಕೊಂಡು ಅಭ್ಯಾಸ ಮಾಡಿದರೆ ಈ ಆಟದಲ್ಲಿ ಯಶಸ್ಸನ್ನು ಸಾಧಿಸಬಹುದು” ಎಂದರು.
ಸಂಚಾಲಕರಾದ ಜೆ.ಪ್ರಹ್ಲಾದ್.ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ “ಉತ್ತಮ ತರಬೇತುದಾರರ ಮಾರ್ಗದರ್ಶನದ ಜೊತೆಗೆ ನಿರಂತರ ಪರಿಶ್ರಮದಿಂದ ಚದುರಂಗದಲ್ಲಿ ಮೇಲುಗೈ ಸಾಧಿಸಬಹುದು” ಎಂದು ಹೇಳಿದರು.

ಜುಲೈ ತಿಂಗಳಲ್ಲಿ ಇಂಗ್ಲೇಂಡ್ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಅಂತರಾಷ್ಟ್ರೀಯ ಶ್ರವಣನ್ಯೂನತೆ ಇರುವ ವ್ಯಕ್ತಿಗಳ ಚೆಸ್ ಪಂದ್ಯಾಟದಲ್ಲಿ ಕಂಚಿನ ಪದಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಯಶಸ್ವಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಗೌಡ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ರತ್ನಾವತಿ , ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನಿಯೋಜಿತ ಅಧ್ಯಕ್ಷರಾದ ಚಿನ್ನಪ್ಪ , ಕಾರ್ಯದರ್ಶಿ ಜಯರಾಮ್ , ಕಲ್ಲಡ್ಕ ವಲಯ ಕ್ರೀಡಾ ಸಮಿತಿಯ ಗೌರವಾಧ್ಯಕ್ಷರು ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವ ಸಲಹೆಗಾರರಾದ ಗಂಗಾಧರ ರೈ ,ಚೆಸ್ನೋಡೆಲ್ಗಳಾದ ಅಜಿತ್ ಶೆಟ್ಟಿ, ಪ್ರೇಮಚಂದ್ರ, ಮಾಣಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್ ರಾವ್, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಉಮಾನಾಥ್ ರೈ, ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಸಿ.ಶ್ರೀಧರ್, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ.ಶೆಟ್ಟಿ ಸ್ವಾಗತಿಸಿ, ಶಿಕ್ಷಕಿಯರಾದ ಲೀಲಾ ಹಾಗೂ ರಶ್ಮಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ ವಂದಿಸಿದರು.
