ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಬ್ರಹ್ಮರ ಕೂಟ್ಲು ಹೆದ್ದಾರಿ ಸುಂಕ ವಸೂಲಿ ಕೇಂದ್ರದ ವರೆಗಿನ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಇಲ್ಲಿ ರಸ್ತೆ ಕಾಮಗಾರಿಯು ಕಳಪೆ ಮಟ್ಟದ್ದಾಗಿದ್ದು, ಕಾಂಕ್ರಿಟು ಎದ್ದು ಹೋಗಿದೆ. ಈ ವಿಷಯದ ಕುರಿತು ದೇವದಾಸ್ ಶೆಟ್ಟಿ ಬಂಟ್ವಾಳ ನಗರ ಠಾಣಾ ಮಾನ್ಯ ಆರಕ್ಷಕ ಉಪ ನಿರ್ದೇಶಕರಿಗೆ ಜು.31 ಮಂಗಳವಾರದಂದು ದೂರು ನೀಡಿದ್ದಾರೆ.

ಕಳೆದ ಹತ್ತಾರು ವರ್ಷದ ಹಿಂದೆ ಬಿ.ಸಿ ರೋಡು ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ನಿರ್ಮಾಣ ಮಾಡಿದ್ದು, ಇದರಿಂದ ದಿನನಿತ್ಯ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅವೈಜ್ಞಾನಿಕ ಮೇಲ್ಸೇತುವೆ ನಿರ್ಮಾಣ, ಮೇಲ್ಸೆತುವೆ ಮೇಲೆ ಮಳೆ ನೀರು ಹರಿದು ಹೋಗಲು ಸೂಕ್ತ ಕೊಳವೆ ವ್ಯವಸ್ಥೆ ಇಲ್ಲದಿರುವುದು, ಸರ್ವೀಸ್ ರಸ್ತೆಯ ಕಳಪೆ ಕಾಮಗಾರಿ, ಅವೈಜ್ಞಾನಿಕ ಚರಂಡಿ ರಚನೆ, ಸರ್ವೀಸ್ ರಸ್ತೆಯಲ್ಲಿ ನೀರು ನಿಲ್ಲುವುದು, ರಸ್ತೆಯಲಿ ಬೃಹತ್ ಗಾತ್ರದ ಹೊಂಡಗಳು, ಇವುಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಮಾತ್ರವಲ್ಲದೆ ಸಾರ್ವಜನಿಕರಿಂದ ಹಲವಾರು ದೂರು ಸಲ್ಲಿಕೆಯಾದರೂ ಇಲಾಖೆಯು ನಿರ್ಲಕ್ಷ್ಯ ತೋರುತ್ತಿದೆ. ಈ ಬಗ್ಗೆ ಕಾರ್ಯನಿರ್ವಹಿಸಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಯೋಜನೆಯ ನಿರ್ದೇಶಕರಾದ ಸ್ಯಾಮ್ಸನ್ ವಿಜಯ್ ಕುಮಾರ್ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಸಾರ್ವಜನಿಕರಿಗೆ ಈ ರೀತಿ ತೊಂದರೆಯಾಗುತ್ತಿದೆ. ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

