ಗುರುಪುರ : ಶ್ರೀಕೃಷ್ಣ ಮಿತ್ರ ಮಂಡಳಿ ಗುರುಪುರ ಇದರ 50ನೇ ವರ್ಷದ ಮೊಸರು ಕುಡಿಕೆ ಉತ್ಸವದಂಗವಾಗಿ ಭಾನುವಾರ(ಜುಲೈ 22) ಗುರುಪುರದ ಚಾಮಾಣ ಹಿಂದುಗಡೆಯ ಬಾಕಿಮಾರು ಗದ್ದೆಯಲ್ಲಿ `ಕೆಸರಿನಲ್ಲಿ ಆಟೋಟ’ ಸ್ಪರ್ಧೆ ಆಯೋಜಿಸಲಾಯಿತು.

ದೀಪ ಬೆಳಗಿಸುವುದರೊಂದಿಗೆ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಉದ್ಯಮಿ ರಮಾನಂದ ಶೆಟ್ಟಿ, ಸ್ಥಳೀಯ ಬಿಜೆಪಿ ನಾಯಕರಾದ ರಾಜೇಶ ಸುವರ್ಣ, ಶ್ರೀಕಾಂತ ಶೆಟ್ಟಿ, ಹರೀಶ ಬಳ್ಳಿ, ಪ್ರಕಾಶ ಮುಂಡ, ಹರೀಶ ಭಂಡಾರಿ, ಸುಧೀರ ಕಾಮತ್, ಪತ್ರಕರ್ತ ಧನಂಜಯ ಗುರುಪುರ ಮೊದಲಾದವರಿದ್ದರು.
ಆರಂಭದಲ್ಲಿ ಸ್ಟಾರ್ ಕಿಡ್ಸ್ ಗುರುಪುರದ ಮಕ್ಕಳು ಕೆಸರು ಗದ್ದೆಯಲ್ಲಿ ಡಾನ್ಸ್ ಮಾಡಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಸ್ಪರ್ಧಾಳುಗಳು ಕೆಸರು ಗದ್ದೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ಮೈದದಿಂದ ನಾಣ್ಯ ತೆಗೆಯುವುದು, ಓಟ, ಹಗ್ಗ ಜಗ್ಗಾಟದಂತಹ ಹಲವು ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು. ಮಧುರಾಜ್ ಮತ್ತು ವಿನೋದ್ ಸ್ಪರ್ಧೆ ನಿರೂಪಿಸಿದರು.
