ಮೂಡುಬಿದಿರೆ: ಪೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದು ಕೋಮು ಪ್ರಚೋದನಕಾರಿ ಸಂದೇಶ ರವಾನಿಸುತ್ತಿದ್ದ ಮತ್ತು ವೈಯಕ್ತಿಕ ಮಾನಹಾನಿ ನಡೆಸುತ್ತಿದ್ದ ಆರೋಪಿ ವಿರುದ್ದ ಸ್ವ-ಧರ್ಮೀಯರೇ ದೂರು ನೀಡಿರುವ ಘಟನೆ ನಡೆದಿದೆ.
ಸುಳ್ಯ ತಾಲೂಕಿನ ಮುರಳಿ ಗ್ರಾಮದ ನಿವಾಸಿ ಇಬ್ರಾಹಿಂ ಖಲೀಲ್ ಪ್ರಕರಣದ ಆರೋಪಿ. ಸದ್ಯ ಈತ ದುಬೈನ ಅಬುದಾಬಿಯಲ್ಲಿ ನೆಲೆಸಿದ್ದು, ಪೇಸ್ಬುಕ್ನಲ್ಲಿ ಹಿಂದೂ ಹೆಸರಿನ ಮತ್ತು ಇಸ್ಲಾಂ ಹೆಸರಿನ ಹಲವು ನಕಲಿ ಖಾತೆಗಳನ್ನು ತೆರೆದಿದ್ದ ಎನ್ನಲಾಗಿದ್ದು, ನಕಲಿ ಖಾತೆಗಳ ಮೂಲಕ ಪರಸ್ಪರ ಕೋಮು ಪ್ರಚೋದನಾಕಾರಿ ಸಂದೇಶ ರವಾನಿಸುತ್ತಿದ್ದ.

ದೇವದಾಸ್ ದಲಿತ ಎಂಬ ಹೆಸರಿನ ನಕಲಿ ಪೇಸ್ಬುಕ್ ಖಾತೆಯ ಮೂಲಕ ಸ್ವತ ಮುಸ್ಲಿಂ ಯುವಕರಿಗೇ ಅಸಭ್ಯ ಸಂದೇಶ ರವಾನಿಸುತ್ತಿದ್ದ ಈತ ಈ ಹಿಂದೆ ಮುಸ್ಲಿಂ ಧರ್ಮಗುರು ಪೈಯಕ್ಕಿ ಉಸ್ತಾದ್ ವಿರುದ್ದವೇ ಅವಹೇಳನಕಾರಿ ಸಂದೇಶ ರವಾನಿಸಿದ್ದು, ಇತ್ತಿಚೆಗೆ ಅವರ ಸಾವಿನ ಸಂದರ್ಭ ಸಿರ್ಕ್ ಕೂಟಕ್ಕೆ ಒಂದು ವಿಕೆಟ್ ಪತನ ಎಂದು ಸಂದೇಶ ಹರಿ ಬಿಟ್ಟು ತನ್ನ ಧರ್ಮದ ವಿರುದ್ದವೇ ವ್ಯಂಗ್ಯವಾಡಿದ್ದ.
ಈತ ಇಸ್ಲಾಂನ ಸಲಾಫಿ ಪಂಗಡಕ್ಕೆ ಸೇರಿದ್ದು, ಸುನ್ನಿ ಪಂಗಡದ ಧರ್ಮಗುರುಗಳನ್ನು ತನ್ನ ನಕಲಿ ಖಾತೆಗಳಲ್ಲಿ ಟೀಕಿಸುತ್ತಿದ್ದ ಎನ್ನಲಾಗಿದ್ದು, ಈ ವಿಚಾರ ಖುದ್ದು, ಸುನ್ನಿ ಮುಖಂಡರಿಗೆ ತಿಳಿದು, ಈತನನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಈತ ಸಮಾಜಿಕ ಜಾಲತಾಣದಲ್ಲೇ ಕೊಲೆ ಬೆದರಿಕೆ ಒಡ್ಡಿದ್ದು, ಪ್ರಕರಣ ಪೋಲಿಸ್ ಠಾಣೆಯ ಮೆಟ್ಟಿಲೇರಿತ್ತು. ಬಳಿಕ ಈತ ಮೂಡುಬಿದಿರೆ ವ್ಯಾಪಾರಿ ಅಬ್ದುಲ್ ಲತೀಫ್ ಎನ್ನುವವರನ್ನು ಟಾರ್ಗೆಟ್ ಮಾಡಿದ್ದು, ಇವರ ವಯಕ್ತಿಕ ಮತ್ತು ಕೌಟುಂಬಿಕ ಮಾನಹಾನಿ ನಡೆಸಿದ್ದು, ಈ ಬಗ್ಗೆ ಲತೀಫ್ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.
