ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ(ರಿ) ವ್ಯವಸ್ಥೆಗೊಳಿಸಲಾದ ನೂತನ ಸಾಂದ್ರ ಶೀತಲೀಕರಣ ಘಟಕವನ್ನು ಮಂಗಳವಾರ ಸ್ಥಳೀಯ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಘದ ದಶಮಾನೋತ್ಸವ ಸಮಾರಂಭ ಸಂಘದ ಆವರಣದಲ್ಲಿ ಜರುಗಿತು.
ಮಹಿಳೆ ಮನಸ್ಸು ಮಾಡಿದರೆ ಏನೂ ಮಾಡಬಲ್ಲಲು. ಮಹಿಳೆ ವಿದ್ಯಾವಂತಳಾಗುತ್ತಿದ್ದು ಸಾಧನೆಯ ಹಾದಿಯಲ್ಲಿದ್ದಾಳೆ. ಗ್ರಾಮೀಣ ಭಾಗದಲ್ಲಿ ಇಂತಹ ಸಂಘ ಕಟ್ಟಿ ಬೆಳೆಸಿರುವುದು ನಿಜಕ್ಕೂ ಉತ್ತಮ ಕೆಲಸ. ಮದುವೆಯಾದ ಮೇಲೆ ಮಹಿಳೆ ಮನೆ ಉತ್ತಮವಾಗಿಡುವತ್ತ ಗಮನಹರಿಸುತ್ತಾಳೆ. ಗ್ರಾಮೀಣ ಪ್ರದೇಶಕ್ಕೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ. ಆದರೆ ಈಗ ಜಗತ್ತು ಬದಲಾಗುತ್ತಿದ್ದು, ಮಹಿಳೆ ಆರ್ಥಿಕವಾಗಿ ಸದೃಢವಾಗಬೇಕಾಗಿದೆ ಎಂದು ನಾಯ್ಕ್ ತಿಳಿಸಿದರು.
ಭತ್ತವಿರಲಿ, ಹೈನುಗಾರಿಕೆ ಇರಲಿ ಎಲ್ಲವೂ ಲಾಭದಾಯಕವಾಗಿದೆ. ಆದರೆ ಆಧುನಿಕ ವಿದ್ಯಮಾನಕ್ಕೆ ಅನುಗುಣವಾಗಿ ಕೃಷಿ ವಿಧಾನ ಅನುಸರಿಸಬೇಕಾಗುತ್ತದೆ. ಉನ್ನತ ವ್ಯಾಸಂಗ ಮಾಡಿದವರು ಕೃಷಿ ಮಾಡಬಾರದೆಂದಿಲ್ಲ. ಕೃಷಿಯಲ್ಲಿ ಹೊಸತನಕ್ಕೆ ವಿದ್ಯೆ ಪೂರಕವಾಗುತ್ತದೆ ಎಂದು ಮೂಲತಃ ಕೃಷಿಕರಾಗಿರುವ ಶಾಸಕ ನಾಯ್ಕ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ವಿಸ್ತøತ ಕಟ್ಟಡದ ಉದ್ಘಾಟಿಸಿದ ದ ಕ ಜಿಲ್ಲಾ ಹಾಲು ಒಕ್ಕೂಟದ(ಮಂಗಳೂರು) ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ಮಾತನಾಡುತ್ತ, ಈಗ ಜಿಲ್ಲೆಯಲ್ಲಿ ಹೈನುಗಾರಿಕೆ ವಿಫುಲವಾಗಿದ್ದು, ಹಾಲು ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತಿದೆ. ಹೈನುಗಾರರೂ ಸ್ವಂತಕ್ಕೆ ಒಂದಷ್ಟು ಹಾಲು ಬಳಸಿಕೊಳ್ಳುವುದು ಒಳ್ಳೆಯದು ಎಂದರು.
ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಡಾ. ಬಿ ವಿ ಸತ್ಯನಾರಾಯಣ(ವ್ಯವಸ್ಥಾಪಕ ನಿರ್ದೇಶಕ, ದ ಕ ಹಾ ಒ, ಮಂಗಳೂರು), ಕೃಷ್ಣ ಭಟ್ ಕೊಂಕೋಡಿ(ನಿರ್ದೇಶಕ, ದ ಕ ಹಾ ಒ, ಮಂಗಳೂರು), ಕೆ ಪಿ ಸುಚರಿತ ಶೆಟ್ಟಿ(ನಿರ್ದೇಶಕ, ದ ಕ ಹಾ ಒ, ಮಂಗಳೂರು), ಡಾ. ನಿತ್ಯಾನಂದ ಭಕ್ತ(ಜಿಪಂ ಸದಸ್ಯ, ಬಂಟ್ವಾಳ), ಯಶವಂತ ಪೊಳಲಿ(ಜಿಪಂ ಸದಸ್ಯೆ, ಬಂಟ್ವಾಳ), ಬಡಗಬೆಳ್ಳೂರು ಗ್ರಾಪಂ ಅಧ್ಯಕ್ಷೆ ಜಯಂತಿ, ಡಾ. ಮಧುಸೂದನ ಕಾಮತ್(ಉಪ-ವ್ಯವಸ್ಥಾಪಕ, ದ ಕ ಹಾ ಒ) ಡಾ. ಶ್ರೀನಿವಾಸ(ಉಪ-ವ್ಯವಸ್ಥಾಪಕ, ದ ಕ ಹಾ ಒ), ಅಬ್ದುಲ್ ಶಮೀರ್(ವಿಸ್ತರಣಾಧಿಕಾರಿ), ಮೋಹನದಾಸ ಮೇಲಾಂಟ(ಗೌರವಾಧ್ಯಕ್ಷ) ಮೊದಲಾದವರು ಇದ್ದರು. ಸಂಘದ ಅಧ್ಯಕ್ಷೆ ಸವಿತಾ ಎಸ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಜಗದೀಶ ಕಾರ್ಯಕ್ರಮ ನಿರೂಪಿಸಿದರೆ, ಪ್ರವೀಣ ಶೆಟ್ಟಿ ವಂದಿಸಿದರು.
ಇಲ್ಲಿ ವ್ಯವಸ್ಥೆಗೊಳಿಸಲಾದ ಈ ಶೀತಲೀಕರಣ ಯಂತ್ರ ಬಂಟ್ವಾಳ ಕ್ಷೇತ್ರದಲ್ಲೇ ಪ್ರಥಮವಾಗಿದೆ. ಇದರಿಂದ ಹೆಚ್ಚು ದಿನ ಹಾಲು ಹಾಳಾಗದಂತೆ ಉಳಿಸಬಹುದಾಗಿದೆ.




