ಕೋಲಾರ: ಅಮೃತ ಸಿಟಿ ಯೋಜನೆಯ ನೆಪದಲ್ಲಿ ಕೋಲಾರ ನಗರಾದ್ಯಂತ ಇರುವ ರಸ್ತೆಗಳನ್ನು ಮೃತ್ಯು ಕೂಪಗಳನ್ನಾಗಿ ಮಾಡುತ್ತಿರುವ ಟೆಂಡರ್ ದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಕಾರ್ಯಪಾಲಕ ಅಭಿಯಂತರ ನಾಯಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಅಮೃತ ಸಿಟಿ ಯೋಜನೆಯಲ್ಲಿ ಒಳಚರಂಡಿ ಕಾಮಗಾರಿಯ ನೆಪದಲ್ಲಿ ನಗರದಾದ್ಯಂತ ಪ್ರಮುಖ ರಸ್ತೆಗಳನ್ನು ಪೈಪ್ಲೈನ್ ಅಳವಡಿಸಲು ಅಗೆದಿರುವ ಚರಂಡಿಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ, ಬೇಕಾಬಿಟ್ಟಿ ಕೆಲಸ ಮಾಡುತ್ತಿರುವ ಟೆಂಡರ್ ದಾರರ ಬೇಜವಾಬ್ದಾರಿಯಿಂದ ನಗರದ ಜನ ಅಧಿಕಾರಿಗಳಿಗೆ ಹಿಡಿಶಾಪವಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಅವ್ಯವಸ್ಥೆಯನ್ನು ಮೂರು ದಿನದ ಒಳಗೆ ಬಗೆಹರಿಸದೇ ಹೋದರೆ ಸಂಬಂಧ ಪಟ್ಟ ಮೂರು ಇಲಾಖೆಯ ಕಚೇರಿಗಳೀಗೆ ಬೀಗ ಜಡಿದು ಬೃಹತ್ ಮಟ್ಟದ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿದ ಸಹಾಯಕ ಇಂಜಿಯರ್ ನಾಯಕ್ ಅವರು, ಮಳೆಗಾಲದಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ಇಲಾಖೆಗೆ ನಿಮ್ಮ ಮನವಿಯನ್ನು ಕಳುಹಿಸಿಕೊಡುತ್ತೇನೆ. ಇಜಿಡಿ ಟೆಂಡರ್ದಾರರನ್ನು ಕಡೆದು ರಸ್ತೆಯ ಪಕ್ಕದಲ್ಲಿ ಅಗೆಯುತ್ತಿರುವ ಚರಂಡಿಯನ್ನು ಪೈಪ್ ಅಳವಡಿಸಿದ ನಂತರ ಗುಣಮಟ್ಟವಾಗಿ ಸರಿಪಡಿಸುವಂತೆ ಎಚ್ಚರಿಕೆ ನೀಡುತ್ತೇನೆ ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಎ. ನಳಿನಿ, ತೆರನಹಳ್ಳಿ ವೆಂಕಟಸ್ವಾಮಿಗೌಡ, ಈಕಂಬಳ್ಳಿ ಮಂಜುನಾಥ್, ಪುರುಷೋತ್ತಮ್, ಪುತ್ತೇರಿ ರಾಜು ಮುಂತಾದವರು ಇದ್ದರು.

