ಬಂಟ್ವಾಳ: ಬಿ.ಸಿ.ರೋಡಿನ ಮೇಲ್ಸೆತುವೆಯಡಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿ ಬುಧವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ ಸಭೆ ನಿರ್ಣಯ ಕೈಗೊಂಡಿದೆ. ಅಧ್ಯಕ್ಷೆ ವಸಂತಿ ಸಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಂಟ್ವಾಳ ಪೇಟೆಯಲ್ಲಿ ಬೆಳಿಗ್ಗೆ ಆರರಿಂದ ಎಂಟು ಗಂಟೆ, ಮಧ್ಯಾಹ್ನ 12ರಿಮದ 3ರವರೆಗೆ ಸರಕು ವಾಹನಗಳಿಂದ ಲೋಡಿಂಗ್, ಅನ್ಲೋಡಿಂಗ್ಗೆ ಅವಕಾಶ ಕಲ್ಪಿಸಲಾಗಿದ್ದು ಉಳಿದ ಸಮಯದಲ್ಲಿ ಘನವಾಹನ ಸಂಚಾರವನ್ನು ಬಂಟ್ವಾಳ ಪೇಟೆ ರಸ್ತೆಯಲ್ಲಿ ನಿಷೇಧಿಸಿ ನಿರ್ಣಯ ಅಂಗೀಕರಿಸಲಾಯಿತು. ಅದೇ ರೀತಿ ಪುರಸಭಾ ವ್ಯಾಪ್ತಿಯ ಗ್ರಾಮಾಂತರ ಪರಿಸರದ ಅಟೋ ರಿಕ್ಷಗಳು ನಗರ ಪ್ರದೇಶಕ್ಕೆ ಬಂದು ಪಾರ್ಕಿಂಗ್ ಮಾಡುತ್ತಿರುವುದನ್ನು ಕೂಡ ಸಭೆಯಲ್ಲಿ ನಿಷೇಧಿಸಿ ನಿರ್ಣಯ ಕೈಗೊಳ್ಳಲಾಯಿತು.

16btl-1
ಅನಧಿಕೃತ ಅಂಗಡಿ ಹಾಘೂ ತಗಡು ಶೀಟು ತೆರವು:
ಬಿ.ಸಿ.ರೋಡಿನಲ್ಲಿರುವ ಅನಧಿಕೃತ ಫಾಸ್ಟ್ಪುಡ್ ಹಾಗೂ ಗೂಡಂಗಡಿಗಳನ್ನು ತೆರವುಗೊಳಿಸುವುದರ ಜೊತೆಗೆ ಅಧಿಕೃತ ಅಂಗಡಿಯ ಮುಂಭಾಗದಲ್ಲಿ ಅನಧಿಕೃತವಾಗಿ ಕಂಬ ಹಾಕಿ ತಹಡು ಶೀಟ್ ಹಾಕಿರುವುದನ್ನು ಕೂಡ ತೆರವುಗೊಳಿಸಲು ಸಭೆ ನಿರ್ಣಯ ಕೈಗೊಂಡಿತು. ಶೀಘ್ರದಲ್ಲೇ ಈ ಕಾರ್ಯಚರಣೆ ನಡೆಸ ಬೇಕು, ತೆರವಿಗೆ ಎರಡು ದಿನದ ಮೊದಲು ಮೌಖಿಕ ಸೂಚನೆ ನೀಡಿ ಬಳಿಕ ತೆರವು ಗೊಳಿಸದಿದ್ದರೆ ಪುರಸಭೆಯೆ ತೆರವು ಕಾರ್ಯಚರಣೆ ಕೈಗೊಳ್ಳಲು ನಿರ್ಧರಿಸಲಾಯಿತು. ಪಾಣೆಮಂಗಳೂರು ಪೇಟೆಯಲ್ಲಿನ ಪಾರ್ಕಿಂಗ್ ಅವ್ಯವಸ್ಥೆಯ ಬಗ್ಗೆ ಸದಸ್ಯೆ ಚಂಚಲಾಕ್ಷಿ ಸಭೆಯ ಗಮನ ಸೆಳೆದರು.
ಸಭೆಯ ಮಧ್ಯೆ ಪದೆ ಪದೇ ಹೊರಗಡೆ ತೆರಳುತ್ತಾ, ಅಶಿಸ್ತು ಪ್ರದರ್ಶಿಸುತ್ತಿದ್ದ ಎಂಜಿನಿರ್ ಡೊಮೆನಿಕ್ ಡಿಮೆಲ್ಲೋ ವಿರುದ್ದ ಕೆಂಡಾಮಂಡಲವಾದ ಸದಸ್ಯ ಸದಾಶಿವ ಬಂಗೇರಾ ಸಭೆಯಲ್ಲಿ ಅಗತ್ಯ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಪರಿಹಾರ ಸೂಚಿಸ ಬೇಕು. ಪದೇ ಪದೇ ನಿಮ್ಮನ್ನು ಕರೆಯಲು ಸಾಧ್ಯವಾಗುವುದಿಲ್ಲ ಎಂದು ಖಾರವಾಗಿ ನುಡಿದರು. ಇದೇ ವೇಳೆ ಸದಸ್ಯರಿಗೆ ಹಾರಿಕೆ ಉತ್ತರ ನೀಡಿ ಜಬವ್ದಾರಿಯಿಂದ ನುಣಿಚಿಕೊಳ್ಳುತ್ತಿದ್ದ ಆರೋಗ್ಯಾಧಿಕಾರಿ ರಾಜಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯ ಗಂಗಾಧರ ನೀವು ಕಾನೂನು ಜಾಸ್ತಿ ಮಾತನಾಡುತ್ತೀರಿ. ಕೆಲಸ ಕಡಿಮೆ ಮಾಡುತ್ತೀರಿ ಎಂದು ಕುಟುಕಿದರು. ಸದಸ್ಯರು ಸಮಸ್ಯೆಯನ್ನು ಹೇಳಿಕೊಂಡು ಬಂದಾಗ ತಕ್ಷಣ ಸ್ಪಂದನೆ ನೀಡಬೇಕು ಎಂದು ಅಧ್ಯಕ್ಷೆ ವಸಂತಿ ಆರೋಗ್ಯಾಧಿಕಾರಿಗೆ ತಾಕೀತು ಮಾಡಿದರು.
ಪುರಸಭೆಗೆ ನೀರಿನಿಂದ 2.76 ಲಕ್ಷ ರು, ಹೊಸ ಸಂಪರ್ಕದಿಂದ ಕೇವಲ 8 ಸಾವಿರ ರುಪಾಯಿ ಆದಾಯ ಬಂದಿದ್ದು ಆದರೆ ನೀರಿಗಾಗಿ 3 ಲಕ್ಷ ರುಪಾಯಿಯಷ್ಟು ವ್ಯಯಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸಲಹೆ ನೀಡಿದ ಸದಸ್ಯ ವಾಸು ಪೂಜಾರಿ ಇದೇ ರೀತಿ ಪುರಸಭೆ ದಿವಾಳಿಯಂಚಿಗೆ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಭೀತಿ ವ್ಯಕ್ತಪಡಿಸಿದರು. ನೀರಿನ ಸಮಸ್ಯೆಗಳಿಗೆ ಶೀಘ್ರವಾಗಿ ಮುಕ್ತಿ ಕಾಣಿಸುವಂತೆಯೂ ಅವರು ಮನವಿ ಮಾಡಿದರು. ಇದೇ ವೇಳೆ ಫ್ಲಾಟ್ವೊಂದಕ್ಕೆ ನೀರಿನ ಸಂಪರ್ಕ ಕಲ್ಪಿಸುವ ಪ್ರಸ್ತಾಪವೊಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸದಾಶಿವ ಬಂಗೇರ ಕಟ್ಟಡ ನಿರ್ಮಾಣದ ವೇಳೆಯೇ ಅವರು ಎಲ್ಲಾ ಮೂಲಭೂತ ಸೌಲಭ್ಯ ಒದಗಿಸ ಬೇಕು, ಉಳ್ಳವರಿಗೆ ನೀರು ಕೊಟ್ಟರೆ ನೀರು ಇಲ್ಲದವರಿಗೆ ಏನು ಮಾಡುವುದು ಎಂದು ಪ್ರಶ್ನಿಸಿದರು. ರಾಮಕೃಷ್ಣ ಆಳ್ವ ಧ್ವನಿಗೂಡಿಸಿದರು.
ಕಳೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ತಿರುಚಿ ದಾಖಲಿಸಿರುವುದು ಮತ್ತು ಸದಸ್ಯರಿಗೆ ಅಗೌರವ ತೋರುತ್ತಿರುವುದನ್ನು ವಿರೋಧಿಸಿ ವಿಪಕ್ಷ ಬಿಜೆಪಿ ಹಾಗೂ ಎಸ್ಡಿಪಿಐ ಸದಸ್ಯರು ಬುಧವಾರ ನಡೆಸದ ಪುರಸಭಾ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಉಪಾಧ್ಯಕ್ಷೆ ಯಾಸ್ಮೀನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ವೇದಿಕೆಯಲ್ಲಿದ್ದರು. ಸದಸ್ಯರಾದ ಬಿ.ಮೋಹನ್, ಪ್ರವೀಣ್, ರಾಮಕೃಷ್ಣ ಆಳ್ವ, ಜಗದೀಶ ಕುಂದರ್ ಚರ್ಚೆಯಲ್ಲಿ ಬಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *