ಚುನಾವಣಾ ಪ್ರಚಾರದಲ್ಲೇ ಪ್ರಮಾಣ ವಚನ ದಿನಾಂಕ ನಿಗದಿ ಮಾಡಿಕೊಂಡಿದ್ದ ಬಿಎಸ್ ಯಡಿಯೂರಪ್ಪ, ತಾನು ಹೇಳಿದಂತೆ ಮೇ 17 ರಂದೇ ಪ್ರಮಾಣ ವಚನ ಸ್ವೀಕಾರ ಮಾಡಿ, ಮಾತು ಉಳಿಸಿಕೊಂಡರು. ಆದರೆ ಹೇಳಿದ್ದ ಮಾತಲ್ಲಿ ಒಂದೆರಡು ಅಂಶಗಳು ಮಾತ್ರ ಬದಲಾವಣೆ ಆಗಿದ್ದವು. ಅವುಗಳೆಂದರೆ ಒಂದು ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತೇನೆ ಎಂದಿದ್ದು, ಮತ್ತೊಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲೇ ಸಿಎಂ ಆಗಿ ಅಧಿಕಾರ ಹಿಡಿಯುತ್ತೇನೆ ಎಂದಿದ್ದು. ಆದರೆ ಇವೆರಡನ್ನು ಬಿಟ್ರೆ ಉಳಿದಂತೆ 17 ರಂದು ಪ್ರಮಾಣ ವಚನ ಸ್ವೀಕಾರ ಮಾಡಿ ಮೂರು ದಿನಗಳ ಹಿಂದೆ ಪ್ರಮಾಣ ವಚನ ಸ್ವೀಕಾರ ಮಾಡಿ, ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಆದ್ರೆ ಇಂದು ಬಹುಮತ ಸಾಬೀತು ಮಾಡುವ ಅಗ್ನಿ ಪರೀಕ್ಷೆ ಎದುರಿಸಬೇಕಿದ್ದು, ಆ ಪರೀಕ್ಷೆಯಲ್ಲಿ ಯಡಿಯೂರಪ್ಪ ಗೆಲ್ತಾರಾ ಅನ್ನೊ ಕುತೂಹಲ ಹೆಚ್ಚಾಗಿದೆ..
ಹೈದ್ರಾಬಾದ್ಗೆ ತೆರಳಿದ್ದ ಕಾಂಗ್ರೆಸ್, ಜೆಡಿಎಸ್ ಶಾಸಕರು, ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಬಂದಿದ್ದಾರೆ. ಇದೀಗ ವಿಧಾನಸೌಧಕ್ಕೆ ಬಂದಿದ್ದು, ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ಸ್ವೀಕಾರ ಮಾಡಲಾಗಿದೆ. ಸಂಜೆ 4 ಗಂಟೆಗೆ ವಿಶ್ವಾಸ ಮತ ಕೋರಲಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದ್ದು, ಲಿಂಗಾಯತ ಶಾಸಕರನ್ನು ಸೆಳೆಯುವ ಕಸರತ್ತು ಕೂಡ ಇನ್ನೂ ಚಾಲ್ತಿಯಲ್ಲಿದೆ. ಈ ನಡುವೆ ಲಿಂಗಾಯತ ಶಾಸಕರೆಲ್ಲ ಸೇರಿಕೊಂಡು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ಕಾಂಗ್ರೆಸ್ ಯಾವ ರೀತಿ ಬಗೆಹರಿಸುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.. ಒಂದು ವೇಳೆ ಕಾಂಗ್ರೆಸ್ ನಾಯಕರು ಈ ಬಗ್ಗೆ ಯಾವುದೇ ನಿರ್ಧಾರ ತಿಳಿಸದಿದ್ದರೆ, ಅವರ ಚಿತ್ತ ಬಿಜೆಪಿ ಕಡೆಗೆ ತಿರುಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಒಟ್ಟಾರೆ ಬಿಜೆಪಿ ವಿಶ್ವಾಸ ಮತ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಹಾಗೂ ಜೆಡಿಎಸ್ನ ಯಾವೊಬ್ಬ ಶಾಸಕರನ್ನು ಸೆಳೆಯಲು ಆಗದಿದ್ದರೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ಕೊಡುವುದು ಅನಿವಾರ್ಯವಾಗಲಿದೆ. ಕೊನೆಯ ಆಟವಾಗಿ ಬಿಜೆಪಿ ಸ್ವಾಭಿಮಾನದ ಮತಯಾಚನೆಗೆ ಮುಂದಾಗಿದ್ದು, ಸಂಜೆ ನಾಲ್ಕು ಗಂಟೆಗೆ ರಾಜಕೀಯ ನಾಟಕಕ್ಕೆ ಅಂತಿನ ತೆರೆ ಬೀಳಲಿದೆ..
ರಾಜಕೀಯ ಕ್ರಿಕೆಟ್ ಆಟದಂತೆ ಕಡೇ ಕ್ಷಣದವರೆಗೂ ಕುತೂಹಲ ಉಳಿಸಿಕೊಳ್ಳಲಿದ್ದು ಕೊನೆಯ ಕ್ಷಣದಲ್ಲಿ ಬಿಎಸ್ ಯಡಿಯೂರಪ್ಪ ನಾಯಕತ್ವಕ್ಕೇ ಶಾಸಕರು ಜೈ ಅಂದರೆ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದು, ಮುಂದಿನ ಆರು ತಿಂಗಳ ಕಾಲ ಯಾವುದೇ ಅಡ್ಡಿ ಆತಂಕವಿಲ್ಲದೆ ಮುಂದುವರಿಯಲಿದ್ದಾರೆ. ಎಷ್ಟೇ ಯತ್ನ ಮಾಡಿದ್ರು ಶಾಸಕರ ವಿಸ್ವಾಸ ಗಳಿಸಲು ಸಾಧ್ಯವಾಗದಿದ್ದರೆ ಯಡಿಯೂರಪ್ಪ ರಾಜೀನಾಮೆ ಕೊಟ್ಟು ಬರಬೇಕಾಗುತ್ತದೆ. ಈಗಾಗಲೇ ಒಂದು ಬಾರಿ ಒಂದು ವಾರಗಳ ಕಾಲ, ಮತ್ತೊಂದು ಬಾರಿ ಮೂರು ವರ್ಷಗಳ ಕಾಲ, ಈಗ ಮತ್ತೆ ಮೂರು ದಿನಗಳ ಕಾಲ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದಂತೆ ಆಗಲಿದೆ.

