ಮೈಸೂರು: ವಿಧಾನಸಭಾ ಚುನಾವಣೆಗೆ ದಿನಗಣನೆಗೆ ಶುರುವಾಗಿದೆ. ಈ ನಡುವೆ ರಾಜ್ಯದ ಪ್ರಮುಖ ವಿಧಾನಸಭಾ ಚುನಾವಣೆ ಕಣ ಗುರುತಿಸಿಕೊಳ್ಳುತ್ತಿರುವ ವರುಣ ವಿಧಾನಸಭಾ ಕ್ಷೇತ್ರದದಿಂದ ಮೈಸೂರಿನ ರಾಜ ಯದುವೀರ್ ಒಡೆಯರ್ ಅವರು ಬಿಜೆಪಿ ಪಕ್ಷದಿಂದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಮೈಸೂರಿನಲ್ಲಿ ಮಾರ್ಚ್ 10 ರಂದು ನೂತನವಾಗಿ ನಿರ್ಮಾಣ ಮಾಡಿರುವ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ವೇಳೆಯಲ್ಲಿ ಸಿಎಂ ಸರ್ಕಾರದ ಕೊಡುಗೆಗಳನ್ನು ತಿಳಿಸಿದ್ದರು. ಈ ವೇಳೆ ಅವರು ತಮ್ಮ ಭಾಷಣದಲ್ಲಿ ಮಾತನಾಡುತ್ತ ರಾಜ್ಯದಲ್ಲಿ ಮೈಸೂರು ರಾಜರ ನಂತರ ಯಾವುದಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ ಎಂದರೇ ಅದು ನಮ್ಮ ಸರ್ಕಾರ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಕಳೆದ ಐದು ವರ್ಷದಲ್ಲಿ ಏನು ಮಾಡಿದ್ದಾರೆ ಅನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ಜನರಿಗೆ ಎಲ್ಲವೂ ಗೊತ್ತಿದೆ. ರಾಜರು ನೀಡಿದ ಕೊಡುಗೆಯನ್ನು ಜನರು ಯಾವತ್ತು ಮರೆಯುವುದಿಲ್ಲ. ಮೈಸೂರು ಸಂಸ್ಥಾನ ಕೊಡುಗೆ ಎಲ್ಲರಿಗೂ ಗೊತ್ತಿದೆ ಅಂತ ಮೈಸೂರು ಮಹರಾಜ ಯದುವೀರ್ ಒಡೆಯರ್ ಖಾರವಾಗಿ ಪ್ರತಿಕ್ರಿಯಿಸಿದ್ದರು.
ಇದೇ ವೇಳೆ ಯದುವೀರ್ ಸಿಎಂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದಂತೆ ಬಿಜೆಪಿಯು ಯದುವೀರ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಗೆ ಸಿ.ಎಂ ಸಿದ್ದರಾಮಯ್ಯ ಅವರ ವಿರುದ್ದ ದಾಳವನ್ನಾಗಿ ಬಳಸಿಕೊಂಡು ವರುಣಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಟೀಕೆಟ್ ನೀಡುವ ಬಗ್ಗೆ ಪಕ್ಷದ ಹಿರಿಯ ನಾಯಕರುಗಳು ಯೋಚಿಸಿದ್ದಾರೆ ಎನ್ನಲಾಗಿದೆ. ಇನ್ನು ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿರುವ ಯದುವೀರ್ ಒಡೆಯರ್ ಅವರನ್ನು ಈ ಚುನಾವಣೆಯಲ್ಲಿ ಅಲ್ಲದೇ ಹೋದರು ಲೋಕಸಭೆ ಚುನಾವಣೆ ಒಳಗಾಗಿಯಾದ್ರೂ ಬಿಜೆಪಿಗೆ ಸೆಳೆಯುವಂತೆ ಪ್ಲ್ಯಾನ್ ಮಾಡಲಾಗ್ತಿದೆ ಎಂದು ತಿಳಿದು ಬಂದಿದೆ.

