ಗುರುಪುರ : ಗುರುಪುರ ಕೈಕಂಬಕ್ಕೆ ಹತ್ತಿರದ ಸೂರಲ್ಪಾಡಿ ನಿವಾಸಿ ಸತೀಶ್ (35) ಎಂಬವರು ನಿನ್ನೆ ಸಂಜೆ ಗುರುಪುರ ಫಲ್ಗುಣಿ ಸೇತುವೆಗೆ ಹತ್ತಿರದಲ್ಲಿ ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿದ್ದು, ಇಂದು ಸಂಜೆ ಶವ ಪತ್ತೆಯಾಯಿತು.
ಕಳೆದ ವರ್ಷ ಮರಳು ವ್ಯಾಪಾರ ಮಾಡುತ್ತಿದ್ದ ಈತ ಈ ವರ್ಷ ಗುರುಪುರದ ದಕ್ಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವಿವಾಹಿತ ಈತಗೆ ಒಂದು ಮಗುವಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಈತ, ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಸಂದೇಹ ವ್ಯಕ್ತಪಡಿಸಲಾಗಿದೆ.
ಆತ್ಮಹತ್ಯೆ ಮಾಡಿದ ಜಾಗದಲ್ಲಿ ಸತೀಶನ ಬೈಕ್ ನಿಂತಿದ್ದು, ಹತ್ತಿರದಲ್ಲೇ ದೋಣಿ ಬಳಿ ಪಾದರಕ್ಷೆ ಪತ್ತೆಯಾಗಿದೆ. ನಿನ್ನೆ ಸಂಜೆಯಿಂದ ಸತೀಶನಿಗಾಗಿ ಹುಡುಕಾಟ ನಡೆಸಿದ್ದು, ಇಂದು ಸಂಜೆ ಗುರುಪುರ ನದಿಯಲ್ಲಿ ಶವ ಪತ್ತೆಯಾಗಿದೆ. ಗಂಜಿಮಠದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿ ಕುಟುಂಬಕ್ಕೆ ಶವ ಬಿಟ್ಟುಕೊಡಲಾಗಿದೆ ಎಂದು ಬಜಪೆ ಪೊಲೀಸರು ತಿಳಿಸಿದರು.
