ಕೈಕಂಬ:ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳು ತಮ್ಮ ವ್ಯಾಪ್ತಿಯ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ, ಈ ಯೋಜನೆ ಕಡ್ಡಾಯ ಅನುಷ್ಠಾನಗೊಳಿಸುವಲ್ಲಿ ಪಂಚಾಯತಿನೊಂದಿಗೆ ಸಹಕರಿಸಬೇಕು ಎಂದು ಗುರುಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ತಿಳಿಸಿದರು.
ಗುರುಪುರ ಗಾ.್ರಪಂ ಸಭಾಭವನದಲ್ಲಿ ನ.22 ಬುಧವಾರ ಆಯೋಜಿಸಲಾದ 2017-18 ಸಾಲಿನ ಪಂಚಾಯತ್ `ಮಹಿಳಾ ಗ್ರಾಮ ಸಭೆ’ಯಲ್ಲಿ ಮಾತನಾಡಿದ ಪಿಡಿಒ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಮೊದಲು ಅಂಗನವಾಡಿ ಕಾರ್ಯಕರ್ತೆಯರು ಮನೆಮಂದಿಗೆ ಮಾಹಿತಿ ನೀಡಬೇಕು ಮತ್ತು ಕೊಳಕಿಲ್ಲದ ತ್ಯಾಜ್ಯ ತಂದು ಅಂಗನವಾಡಿಗೆ ಹಾಕುವಂತೆ ಮನವೊಲಿಸಬೇಕು. ಅಂಗನವಾಡಿಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಪ್ರತಿ ತಿಂಗಳ ಮೂರನೇ ಶನಿವಾರ ಬೆಳಿಗ್ಗೆ ಪಂಚಾಯತ್ ಸಿಬ್ಬಂದಿ ಸಂಗ್ರಹಿಸಲಿದ್ದಾರೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಎಫ್ಐಆರ್ ದಾಖಲಿಸುವ ಅವಕಾಶವಿದೆ ಎಂದರು.


ಸರ್ಕಾರದಿಂದ ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಭಾರತಿ ಮಾತನಾಡುತ್ತ, ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಲಭ್ಯವಿರುವ ಪೌಷ್ಠಿಕ ಆಹಾರ ಪಡೆದು, ಮಕ್ಕಳ ಅಪೌಷ್ಠಿಕತೆ ಪ್ರಮಾಣ ಕಡಿಮೆಗೊಳಿಸಬೇಕು. ಸರ್ಕಾರದ ಯೋಜನೆ ಯಶಸ್ವಿಗೊಳಿಸಲು ಅಂಗನವಾಡಿ ಸಿಬ್ಬಂದಿಯು ಹೆಚ್ಚು ಮುತುವರ್ಜಿ ವಹಿಸಿರುವುದರಿಂದ ಈಗ ಅಪೌಷ್ಠಿಕತೆ ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗಿದೆ.ಕೇಂದ್ರದ ಹೊಸ `ಮಾತೃ ಬಂಧನ’ ಯೋಜನೆಯನ್ವಯ ಪ್ರತಿಯೊಬ್ಬ ಗರ್ಭಿಣಿಯ ಬ್ಯಾಂಕ್ ಖಾತೆಗೆ ಜನವರಿ ಒಂದರಿಂದ 5,000 ರೂ ಜಮೆಯಾಗಲಿದ್ದು, ಮೊದಲಿಗೆ ಗರ್ಭಿಣಿಗೆ 3,000 ರೂ ಹಾಗೂ ಮಗು ಹುಟ್ಟಿದ ಬಳಿಕ 2,000 ರೂ ಸಿಗಲಿದೆ ಎಂದರು.
ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಮಹಿಳೆಯರ ಹಕ್ಕುಗಳ ಮತ್ತು ಸರ್ಕಾರದ ಸವಲತ್ತುಗಳ ಬಗ್ಗೆ ಚರ್ಚಿಸಿ, ಲಭ್ಯವಿರುವ ಸಲಹೆಯಂತೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು. ಗ್ರಾಪಂ ಅಧ್ಯಕ್ಷೆ ರುಕಿಯಾ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ 13 ಅಂಗನವಾಡಿಗಳು, ಸ್ತ್ರೀಶಕ್ತಿ ಮತ್ತು ಸ್ವ-ಸಹಾಯ ಸಂಘಗಳ ಸಿಬ್ಬಂದಿ, ಗ್ರಾಮಸ್ಥರು, ಸದಸ್ಯರಾದ ಜಯಲಕ್ಷ್ಮೀ, ಉಮೈ ಬಾನು, ಯಶವಂತ ಶೆಟ್ಟಿ, ಸದಾಶಿವ ಕೆ ಶೆಟ್ಟಿ, ಗ್ಲಾಡಿಯಸ್ ಮೊದಲಾವರು ಇದ್ದರು.
