ಸುಳ್ಯ ಕ್ಷೇತ್ರದಲ್ಲಿ ಬಿ ಫಾರಂ ತಂದೆಗೋ.. ಮಗನಿಗೋ…?ಕಾಂಗ್ರೆಸ್ ನಡೆ ಇನ್ನೂ ನಿಗೂಢ, ಅಂಗಾರರಿಗೆ ಸವಾಲು ಒಡ್ಡುವವರು ಯಾರು?
ಸುಳ್ಯ: 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರದಿಂದ ಸಿದ್ಧತೆ ನಡೆಸಿದ್ದು ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಒಂದು ವರ್ಷ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಡಾ. ರಘು ಬೆಳ್ಳಿಪಾಡಿ ಅವರ ಹೆಸರು ಅಂತಿಮಗೊಂಡಿದೆಯೆಂದು ಹೇಳಲಾಗುತ್ತಿದ್ದರೂ ಅವರ ಮಗ ಪ್ರಹ್ಲಾದ್ ಬೆಳ್ಳಿಪಾಡಿ ಹೆಸರು ಕೇಳಿ ಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ 7 ಕಾಂಗ್ರೆಸ್ ಕೈಯಲ್ಲಿದೆ. ಆದರೆ ಮೀಸಲಾತಿ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 5 ನೇ ಬಾರಿ ಶಾಸಕರಾಗಿರುವ ಮೊಗೇರ ಸಮುದಾಯದ ಎಸ್. ಅಂಗಾರರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಎಲ್ಲಾ ಸಿದ್ದತೆಯನ್ನು ಬಿಜೆಪಿ ಮಾಡುತ್ತಿದೆ. ಕಳೆದ ಬಾರಿ ಡಾ.ರಘು ರವರು ಅಂಗಾರರೆದುರು 1373 ಮತಗಳಿಂದ ಸೋಲನ್ನು ಅನುಭವಿಸಿದ್ದರು.
ಈ ಭಾರಿ ಮತ್ತೊಮ್ಮೆ ಅಧಿಕಾರ ಮುಂದುವರೆಸುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ 8 ಕ್ಷೇತ್ರ ತನ್ನದಾಗಿಸಲು ಈಗಾಗಲೇ ತಯಾರಿ ಆರಂಭಿಸಿದೆ. ಅದರಲ್ಲೂ ಡಾ ರಘು ರವರನ್ನೇ ಕಾಂಗ್ರೆಸ್ ನಲ್ಲಿ ಸುಳ್ಯದಲ್ಲಿ ನಿಲ್ಲಿಸಿ ಗೆಲ್ಲಿಸುವ ಪ್ರಯತ್ನದಲ್ಲಿದೆ. ಕೆಲವು ಕಾಂಗ್ರೆಸ್ ಮುಖಂಡರ ಒಲವು ಅವರ ಮಗ ರಘು ಬೆಳ್ಳಿಪಾಡಿಯವರ ಕಡೆಗೂ ಇದೆ ಎನ್ನಲಾಗುತ್ತಿದೆ.
ಡಾ. ರಘು, ಪ್ರಹ್ಲಾದ್ ಮತ್ತು ಶಾಸಕ ಅಂಗಾರ
ಒಂದು ವೇಳೆ ಡಾ ರಘು ರವರ ಬದಲಿಗೆ ಯುವ ಕಾಂಗ್ರೆಸ್ ಪದಾಧಿಕಾರಿಯಾಗಿರುವ ಬಹುತೇಕ ಎಲ್ಲ ನಾಯಕರೊಂದಿಗೆ ಒಡನಾಟ ಹೊಂದಿರುವ ಡಾ. ರಘುರವರ ಮಗ ಪ್ರಹ್ಲಾದ್ ಬೆಳ್ಳಿಪ್ಪಾಡಿ ಅವರನ್ನು ಕೂಡ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. 1983ರಲ್ಲಿ ಭಾರತೀಯ ಜನತಾ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿ ಕೇವಲ 18 ತಿಂಗಳು ಸುಳ್ಯವನ್ನು ಪ್ರತಿನಿಧಿಸಿದ್ದ ಬಾಕಿಲ ಹುಕ್ರಪ್ಪರವರು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದು ಆಮ್ಆದ್ಮಿಯೂ ಖಾತೆ ತೆರೆಯಲು ಪ್ರಯತ್ನ ನಡೆಸಲಿದೆ.
ಗೋಕುಲದಾಸ್ ನಾಯಕ್, ಹಾಗೂ ನಂದರಾಜ್ ಈ ಬಾರಿ ಕಾಂಗ್ರೆಸ್ನ ಆಕಾಂಕ್ಷಿ ಯಾಗಿದ್ದಾರೆ. ಇಲ್ಲಿ ಜೆಡಿಎಸ್ ಪ್ರಾಬಲ್ಯವಿಲ್ಲದಿದ್ದರೂ ಎಸ್ಡಿಪಿಐ ಯಲ್ಲಿ ಕೂಸಪ್ಪರವರು 2 ನೇ ಭಾರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮೊಗೇರರ ಸಮುದಾಯದ ನಾಯಕರ ಈ ಪೈಪೋಟಿ ಈಗ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಅಂತಿಮವಾಗಿ ಬಿ ಫಾರಂ ಯಾರ ಕೈಗೆ ಒಲಿಯಲಿದೆ ಎಂಬುದನ್ನು ಕಾದು ನೋಡ ಬೇಕಾಗಿದೆ.
ಸುಳ್ಯ ತಾಲೂಕಿನ ಹಲವು ರಸ್ತೆ ಕಾಮಗಾರಿ, ಮೋರಿಗಳ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ನಿಧಿಯಿಂದ ಪರಿಹಾರ ಒದಗಿಸುವಲ್ಲಿ ಡಾ. ರಘು ಬೆಳ್ಳಿಪಾಡಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲ ಜನರೊಂದಿಗೆ ಮತ್ತು ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಡಾ. ಬಿ. ರಘುರವರಂತೆ ಮತದಾರರನ್ನು ತನ್ನಡೆಡಗೆ ಸೆಳೆಯಲು ಬೇರೆ ಯಾರಿಗೂ ಸಾಧ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ಗೂ ತಿಳಿದಿದೆ. ಇಲ್ಲಿನ ಒಕ್ಕಲಿಗ ಗೌಡ ಸಮುದಾಯ ಭವನದ ಕಾಮಗಾರಿಗೆ 50 ಲಕ್ಷ ರು. ಅನುದಾನ ಒದಗಿಸುವಲ್ಲಿ ಇವರುಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ನಂದರಾಜ ಸಂಕೇಶ್ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನವಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಕಾಂಗ್ರೆಸ್ನ ಅಭ್ಯರ್ಥಿಯಾಗಿ ಡಾ. ರಘು ಸ್ಪರ್ಧಿಸುವುದು ಬಹುತೇಖ ಅಂತಿಮವಾಗಿದ್ದು ಎಐಸಿಸಿ ಹಾಗೂ ಕೆಪಿಸಿಸಿಯ ಅಂತರಿಕ ಸಮೀಕ್ಷೆಯಲ್ಲಿ ಮತದಾರನ ಒಲವು ಕಾಂಗ್ರೆಸ್ ಪಕ್ಷಕಿಂತ ಡಾ. ರಘು ಅವರ ಮೇಲಿದೆ ಎಂದು ಬಲ್ಲ ಮೂಲಗಳಿಂದ ಖಚಿತಗೊಂಡಿದೆ.
2013 ರಲ್ಲಿನ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಲವಾರು ಹೆಸರುಗಳು ಇದ್ದರೂ ಅಂತಿಮವಾಗಿ ಡಾ. ರಘು ಹೆಸರು ಅಂತಿಮ ಗೊಂಡಿದ್ದು ಕಳೆದ ಬಾರಿ ಸೋತರೂ ಸಹ ಕ್ಷೇತ್ರದ ಅಭಿವೃದ್ಧಿಯಲ್ಲಿ ನೂರರಷ್ಟು ತೊಡಗಿಸಿಕೊಂಡಿದ್ದು ಮತದಾರರ ಒಲವು ರಘು ಕಡೆಗೆ ಬೀಳಲು ಸಹಾಯವಾಗಿದೆ. ತನ್ನ ಬಿಡುವಿನಲ್ಲಿ ವೃತ್ತಿಯ ಜತೆಗೆ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಅಲ್ಲದೆ ಹಲವಾರು ಕಾಮಗಾರಿಗಳನ್ನು ಕ್ಷೇತ್ರದ ಉಸ್ತುವಾರಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ಸಚಿವರುಗಳ ಮೇಲ್ಉಸ್ತುವಾರಿಯಲ್ಲಿ ಬಹುತೇಖ ಕಾಮಗಾರಿಗಳು ಪೂರ್ಣಗೊಂಡಿದೆ.
* ಜಿಲ್ಲೆಯಲ್ಲಿ ರೈ ಮಾತು ಅಂತಿಮ
ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ಬಿ. ರಮಾನಾಥ ರೈ ಮಾತಿಗೆ ತೂಕವಿದ್ದು ಡಾ. ರಘು ಕೂಡಾ ಬೆಳ್ಳಿಪಾಡಿ ಮನೆತನದ ಹಿರಿಯ ರಾಜಕಾರಣಿ ಸಂಕಪ್ಪ ರೈ ಅವರ ಗರಡಿಯಲ್ಲಿ ಪಳಗಿದವರು. ರಘು ಈ ಬಾರಿ ಆಕಾಂಕ್ಷಿಯಾಗಿದ್ದು ಹೈಕಮಾಂಡ್ ಮಟ್ಟದಲ್ಲಿ ಹಸಿರು ನಿಶಾನೆ ಸಿಕ್ಕಿರುತ್ತದೆ. ಕಳೆದ ಚುನಾವಣೆಯಲ್ಲಿ ಕಠಿಣ ಪೈಪೋಟಿಯ ನಡುವೆ 1370 ಮತಗಳಿಂದ ಸೊತರೂ ಪಕ್ಷದ ನಾಯಕರು ನಿರಂತರವಾಗಿ ಡಾ. ರಘು ಅವರನ್ನು ಬೆಂಬಲಿಸಿರುವುದು ಅವರ ಪಾಲಿಗೆ ಮತ್ತಷ್ಟು ಸಹಕಾರಿಯಾಗಿದೆ. ಅಲ್ಲದೇ ಡಾ. ರಘು ಈ ಬಾರಿ ರಾಜೀವ ಗಾಂಧಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿರುದಲ್ಲದೆ ಕೆಪಿಸಿಸಿಯ ಸದಸ್ಯರು ಹೌದು.