ವಾಮಂಜೂರು: ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಮೊದಲ ರಕ್ಷಕ ಶಿಕ್ಷಕ ಸಭೆಯು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ಜನಾರ್ದನ ಆಚಾರ್ಯ ಬೈಕಾಡಿ ಮಾತನಾಡಿ” ಮಾನವನ ಜೀವನದಲ್ಲಿ ಆಚರಣೆ, ನಂಬಿಕೆ ಇದ್ದಲ್ಲಿ ಸಮಾಜಮುಖಿ ಮೌಲ್ಯಗಳು ಸದಾ ಜಾಗೃತವಾಗಿರುತ್ತದೆ. ಮೌಲ್ಯಗಳು ಮಾನವನ ಉತ್ತಮ ಬದುಕಿಗೆ ಬುನಾದಿಯಾಗಿದ್ದು ಅದನ್ನು ಅಳವಡಿಸಿಕೊಳ್ಳುವುದರ ಮೂಲಕ ಬದುಕು ಗೌರವಯುತವಾಗುತ್ತದೆ. ಎಂದು ಅವರು ಶುಕ್ರವಾರ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾಭ್ಯಾಸ ಕ್ರಮದಲ್ಲಿ ಮಕ್ಕಳು ಅಂಕಗಳನ್ನು ಗಳಿಸುವುದು ಮಾತ್ರ ಉದ್ದೇಶವಾಗಬಾರದು ಅದು ಮೌಲ್ಯಯುತ ಸ್ವತಂತ್ರ ಬದುಕನ್ನು ಕಟ್ಟಿಕೊಡಲು ಪೂರಕವಾಗಬೇಕು ಎಂದರು.
2017-18ರ ಶೈಕ್ಷಣಿಕ ವರ್ಷಕ್ಕೆ ರಕ್ಷಕ ಶಿಕ್ಷಕ ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ಆರಿಸಲಾಯಿತು. ಶ್ರೀಮತೀ ಮೀನಾಕ್ಷಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಶ್ರೀ ಕೃಷ್ಣ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಶಾಲಾ ಶಿಕ್ಷಕಿ ಶ್ರೀಮತೀ ಭಾರತೀ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್ ಅವರು ವಹಿಸಿದ್ದರು. ಹೈಸ್ಕೂಲ್ ಮುಖ್ಯಸ್ಥರಾದ ಶ್ರೀ ಅಶೋಕ್ ಕುಮಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತೀ ಮಾರ್ಯಟ್ ಮಸ್ಕರೇನಸ್, ನಿಕಟಪೂರ್ವ ರಕ್ಷಕ ಷಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತೀ ನಸೀಮಾ ಭಾನು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಶೇಖರ್ ಕಡ್ತಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಅಧ್ಯಾಪಕ ಶ್ರೀ ರಮೇಶ್ ಆಚಾರ್ ವಂದಿಸಿದರು.
