ನವದೆಹಲಿ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಆಯ್ಕೆಯಾದ ಬೆನ್ನಲ್ಲೇ ಪ್ರತಿಪಕ್ಷ ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳೊಂದಿಗೆ ತೆರೆಮರೆಯ ಕಸರತ್ತು ನಡೆಸಿದೆ.ಎನ್ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಬಿಹಾರ ಸಿಎಂ ನಿತಿಶ್ಕುಮಾರ್ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಇತ್ತ ಕಾಂಗ್ರೆಸ್ ಹಾಗೂ ಯುಪಿಎ ಮಿತ್ರ ಪಕ್ಷಗಳು ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರ್ ಅವರನ್ನು ಕಣಕ್ಕಿಳಿಸಲು ಇಂದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ನೇತೃತ್ವದಲ್ಲಿ ಯುಪಿಯ ಮಿತ್ರಪಕ್ಷಗಳು ಸಭೆ ನಡೆಸಲು ಸಜ್ಜಾಗಿವೆ.
ಮೀರಾಕುಮಾರ್ ಸಹ ದಲಿತ ಸಮುದಾಯದವರಾಗಿದ್ದು, ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಎನ್ಡಿಎ ದಲಿತ್ ಟ್ರಂಪ್ ಕಾರ್ಡ್ ಉಪಯೋಗಿಸಿದಂತೆ ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರಾಗಿದ್ದ ಹಾಗೂ ಮಾಜಿ ಕೇಂದ್ರ ಸಚಿವೆ ಮೀರಾಕುಮಾರ್ರನ್ನು ನಾಮನಿರ್ದೇಶಿಸಿ ಪ್ರತಿಪಕ್ಷಗಳಿಗೆ ಸಡ್ಡು ಹೊಡೆಯಲು ಯುಪಿಎ ಒಕ್ಕೂಟ ನಿರ್ಧರಿಸಿದೆ ಎನ್ನಲಾಗಿದೆ.ಈಗಾಗಲೇ ಬಿಎಸ್ಪಿ ದಲಿತ ಅಭ್ಯರ್ಥಿಯನ್ನು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಯುಪಿಎ ಅಧಿನಾಯಕಿ ಸೋನಿಯಾಗಾಂಧಿ ದಲಿತರಾದ ಮೀರಾಕುಮಾರ್ ಅವರನ್ನು ನಾಮನಿರ್ದೇಶಿಸುವುದು ಬಹುತೇಕ ಖಚಿತವಾಗಿದೆ.ಇಂದು ಪ್ರಮುಖ 17 ಪ್ರತಿಪಕ್ಷಗಳು ಸಭೆ ಸೇರಲಿದ್ದು, ಅಭ್ಯರ್ಥಿಯ ಆಯ್ಕೆ ಕುತೂಹಲ ಕೆರಳಿಸಿದೆ.

