ಬಂಟ್ವಾಳ: ಅಖಿಲ ಭಾರತ ಮಟ್ಟದ 2016ನೆ ಸಾಲಿನ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಬಂಟ್ವಾಳದ ನವೀನ್ ಭಟ್ 37ನೆ ಕ್ರಮಾಂಕದಲ್ಲಿ ತೇರ್ಗಡೆ ಹೊಂದಿರುತ್ತಾರೆ.ನವೀನ್ ಬಂಟ್ವಾಳದ ಪಿಡಬ್ಲ್ಯುಡಿ ಎಂಜಿನಿಯರ್ ಆಗಿರುವ ಉಮೇಶ್ ಭಟ್ ಪುತ್ರ. ದಕ್ಷ ಅಧಿಕಾರಿಯಷ್ಟೇ ಸೌಮ್ಯ ಸ್ವಭಾವಕ್ಕೆ ಹೆಸರಾಗಿರುವ ಉಮೇಶ್ ಭಟ್ ದಂಪತಿಯ ಇಬ್ಬರು ಮಕ್ಕಳಲ್ಲಿ ನವೀನ್ ಎಂಬಿಬಿಎಸ್ ಮುಗಿಸಿದರೆ ನವ್ಯಾ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದಾರೆ. ಪತ್ನಿ ವಿಜಯಲಕ್ಷಿ ಮನೆಯಲ್ಲೇ ಇದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ನವೀನ್ ಭಟ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೂಡಬಿದಿರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮತ್ತು ಬಂಟ್ವಾಳ ತಾಲೂಕು ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿದ್ದರು. ಪ್ರೌಢ ಶಾಲೆ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಮಾಡಿದ್ದರು. 2009ನೆ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಮೊದಲ ರ್ಯಾಂಕ್ ಪಡೆದಿದ್ದರು. ಸಿಇಟಿ ಪರೀಕ್ಷೆಯಲ್ಲಿ ಟಾಪರ್ ಆದ ನವೀನ್ ಭಟ್ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಗೆ ಸೇರಿದ್ದರು. ಆ ಸಂದರ್ಭದಲ್ಲೇ ಐಎಎಸ್ ಆಗುವ ಕನಸನ್ನು ಹೊಂದಿದ್ದ ನವೀನ್ ಎಂಬಿಬಿಎಸ್ ಓದಿದ ಮೇಲೆ ಚೆನ್ನೈನ ಶಂಕರ್ ಕೋಚಿಂಗ್ನಲ್ಲಿ ಆರು ತಿಂಗಳು ಐಎಎಸ್ ಕೋಚಿಂಗ್ಗೆ ಸೇರಿದ್ದರು.

ಕುಟುಂಬದಲ್ಲಿ ವಿವಿಧ ಸರಕಾರಿ ಹುದ್ದೆಯಲ್ಲಿರುವವರು ಇದ್ದರೂ ಐಎಎಸ್ ಮಾಡಿದವರು ಯಾರೂ ಇಲ್ಲ ಎಂಬುದು ನವೀನ್ ಭಟ್ ಅಜ್ಜ ರಘುರಾಮ್ ಭಟ್ ಹೇಳುತ್ತಿದ್ದರು. ಕಂದಾಯ ಇಲಾಖೆಯಲ್ಲಿ ಶಿರಸ್ಥೇದಾರ್ ಆಗಿದ್ದ ಅವರು ಜಿಲ್ಲಾಧಿಕಾರಿಗಳಿಗೆ ದೇವರ ಮರ್ಯಾದೆ ಕೊಡುತ್ತಿದ್ದರು. ನನ್ನ ಕುಟುಂಬದಲ್ಲಿ ಯಾರಾದರು ಡಿಸಿ ಆಗಬೇಕೆಂಬ ಆಸೆಯೂ ಅವರಿಗಿತ್ತು. ಇದೀಗ ಅಜ್ಜನ ಆಸೆಯನ್ನು ಮೊಮ್ಮಗ ನನಸು ಮಾಡಿದ್ದಾನೆ.ನವೀನ್ ಭಟ್ ಮೊದಲ ಪ್ರಯತ್ನದಲ್ಲೇ ಯಶಸ್ಸು ಖಂಡಿದ್ದು ಇಡೀ ಕುಟುಂಬಕ್ಕೆ ಖುಷಿ ಕೊಟ್ಟಿದೆ. ಐಎಎಸ್ ಆಗಿ ಕರ್ನಾಟಕ ಕೇಡರ್ನಲ್ಲೇ ಕೆಲಸ ಮಾಡುವ ಆಸೆಯನ್ನು ಹೊಂದಿದ್ದೇವೆ. ಐಎಎಸ್ ಎಷ್ಟೇ ಒತ್ತಡದ ಕೆಲಸವಾದರೂ ಜನಸಾಮಾನ್ಯರ ಬಳಿಗೆ ಹೋಗುವ ಉದ್ಯೋಗವಾಗಿರುವುದರಿಂದ ಅದನ್ನು ಇಷ್ಟಪಟ್ಟಿದ್ದೇನೆ ಎಂದು ಅವರ ತಂದೆ ಉಮೇಶ್ ಭಟ್ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಅಳಿಕೆ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ ಪಿಯುಸಿಯಲ್ಲಿದ್ದ 15 ಮಂದಿ ಸಹಪಾಠಿಗಳು ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ಗೆ ಸೇರಿದ್ದರು. ಹಗಲು ರಾತ್ರಿ ನಿರಂತರ ಪರಿಶ್ರಮದಿಂದ 2016ನೆ ಸಾಲಿನ ಯುಪಿಎಸ್ಸಿ ಪರೀಕ್ಷೆ ಬರೆದ 15 ಮಂದಿಯಲ್ಲಿ ಐದು ಮಂದಿ ಯಶಸ್ಸು ಕಂಡಿದ್ದಾರೆ. ನವೀನ್ಗೆ ಟಾಪರ್ ಆಗಲು ಗೆಳೆಯರ ಪ್ರೋತ್ಸಾಹವು ಇತ್ತು ಎಂದು ಉಮೇಶ್ ಭಟ್ ಸುದ್ದಿ 9 ಗೆ ಪ್ರತಿಕ್ರಿಯಿಸಿದ್ದಾರೆ.

