ಬಂಟ್ವಾಳ : ಧಾರ್ಮಿಕ ಹಾಗೂ ಸಾಮಾಜಿಕ ಸೌಹಾರ್ದತೆ ಇದ್ದಲ್ಲಿ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಜಾತಿ-ಧರ್ಮೀಯರು ಶ್ರಮಿಸಬೇಕಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯ ಮನಸ್ಸುಗಳನ್ನು ಪೋಣಿಸಲು ಸಹಕಾರಿಯಾಗಲಿ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಆಲಡ್ಕ-ಪಾಣೆಮಂಗಳೂರು ಶಾಖೆಯ 3ನೇ ವಾರ್ಷಿಕೋತ್ಸವದ ಅಂಗವಾಗಿ ಆಲಡ್ಕ ಮೈದಾನ-ಸಂಶುಲ್ ಉಲಮಾ ನಗರದ ಮರ್ಹೂಂ ಶೈಖುನಾ ಸಜಿಪ ಉಸ್ತಾದ್ ವೇದಿಕೆಯಲ್ಲಿ ಭಾನುವಾರ ರಾತ್ರಿ ನಡೆದ ಸಂಶುಲ್ ಉಲಮಾ ಅನುಸ್ಮರಣೆ ಹಾಗೂ ಸಮಸ್ತ ಆದರ್ಶ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ದ್ವೇಷದಿಂದ ಈ ಜಗತ್ತಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಲು ಸಾಧ್ಯವಿದೆ ಎಂದರು.
ಮೂಡಿಗೆರೆ ಖಾಝಿ ಖಾಸಿಂ ಮುಸ್ಲಿಯಾರ್ ಉದ್ಘಾಟಿಸಿದರು. ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ನೇತೃತ್ವ ವಹಿಸಿದ್ದರು. ಸಯ್ಯಿದ್ ಎನ್.ಪಿ.ಎಂ. ಫಝಲ್ ಹಾಮಿದ್ ಪೂಕೋಯ ತಂಙಳ್ ಅಲ್-ಬುಖಾರಿ ಕುನ್ನುಂಗೈ ದುವಾಶಿರ್ವಚನಗೈದರು. ಮಾಡನ್ನೂರ್ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ಮುಖ್ಯ ಭಾಷಣಗೈದರು.
ಮುಖ್ಯ ಅತಿಥಿಗಳಾಗಿ ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಸದಾಶಿವ ಬಂಗೇರ, ಮಾಜಿ ಸದಸ್ಯ ಹಾಜಿ ಪಿ. ಮುಹಮ್ಮದ್ ರಫೀಕ್, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಚ್.ಎಸ್. ಉಸ್ಮಾನ್ ಹಾಜಿ ಪಾಣೆಮಂಗಳೂರು, ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಹಾಜಿ ಎನ್.ಎಚ್. ಆದಂ ಫೈಝಿ, ಪ್ರಮುಖರಾದ ಅಹ್ಮದ್ ಬಾವಾ ಯಾಸೀನ್, ಹಾಜಿ ಎಸ್. ಅಬ್ಬಾಸ್ ಸಜಿಪ, ಪಿ.ಬಿ. ಅಹ್ಮದ್ ಹಾಜಿ ಪಾಣೆಮಂಗಳೂರು ಮೊದಲಾದವರು ಭಾಗವಹಿಸಿದ್ದರು.

