ಬಂಟ್ವಾಳ : ಕಳೆದ ಕೆಲ ದಿನಗಳಿಂದ ಹೊಗೆಯಾಡುತ್ತಿದ್ದ ವೈಯುಕ್ತಿಕ ದ್ವೇಷ ಸ್ಫೋಟಗೊಂಡ ಪರಿಣಾಮ ಗುಂಪು ಘರ್ಷಣೆಗೆ ಕಾರಣವಾಗಿ ಓರ್ವನಿಗೆ ಚೂರಿಯಿಂದ ಇರಿದ ಘಟನೆ ಬಂಟ್ವಾಳ-ಕೆಳಗಿನಪೇಟೆ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಸ್ಥಳೀಯ ನಿವಾಸಿ ಬಿಜೆಪಿ ಮುಂದಾಳು ಖಲೀಲ್ ಹಾಗೂ ಇಲ್ಲಿನ ಗುಡ್ಡೆ ನಿವಾಸಿ ಮಾಂಸ ವ್ಯಾಪಾರಿ ಸನಾವುಲ್ಲ ಎಂಬವರ ನಡುವೆ ಕಳೆದ ಕೆಲವು ದಿನಗಳಿಂದ ವೈಯುಕ್ತಿಕ ಕಾರಣಗಳಿಗಾಗಿ ದ್ವೇಷ ಹೊಗೆಯಾಡುತ್ತಿತ್ತು. ತೀರಾ ಇತ್ತೀಚೆಗೆ ರಾತ್ರಿ ಹೊತ್ತಿನಲ್ಲೇ ಕೆಳಗಿನಪೇಟೆಯಲ್ಲಿ ಖಲೀಲ್ ಹಾಗೂ ಸನಾವುಲ್ಲ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಪರಸ್ಪರ ಮಾತಿನ ಚಕಮಕಿ ನಡೆದು ಘರ್ಷಣೆಯ ಹಂತದವರೆಗೂ ತಲುಪಿತ್ತು.
ಇದರ ಮುಂದುವರಿದ ಭಾಗವಾಗಿ ಮಂಗಳವಾರ ರಾತ್ರಿ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಈ ಬಾರಿ ಇದು ಸನಾವುಲ್ಲಾ-ಖಲೀಲ್ ಬೆಂಬಲಿಗರ ನಡುವಿನ ಹೊಕೈ ಆಗಿ ಪರಿಣಮಿಸಿ ಪರಿಸ್ಥಿತಿ ಕೈಮೀರಿದೆ. ಸನಾವುಲ್ಲ ಸಹೋದರ ಅನ್ವರ್ ಎಂಬಾತನಿಗೆ ಖಲೀಲ್ ಸಂಬಂಧಿ ಅಬ್ದುಲ್ ರಹಿಮಾನ್ ಎಂಬಾತ ಚೂರಿಯಿಂದ ಇರಿದಿದ್ದಾನೆ. ಚೂರಿ ಇರಿತದಿಂದ ಗಂಭೀರ ಗಾಯಗೊಂಡ ಅನ್ವರ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಅನ್ವರ್ನನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಇಬ್ಬರು ವ್ಯಕ್ತಿಗಳ ಬೆಂಬಲಿಗರು ಮತ್ತೆ ಪೇಟೆಯಲ್ಲಿ ಹೊಡೆದಾಟಕ್ಕೆ ಇಳಿದಿದ್ದಾರೆ ಎನ್ನಲಾಗಿದ್ದು, ಸನಾವುಲ್ಲ ಬೆಂಬಲಿಗರು ಖಲೀಲ್ ಮನೆ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದ್ದಲ್ಲದೆ ಮನೆ ಮಂದಿ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಮೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಎಲ್ಲರೂ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿಮರ್ಾಣಗೊಂಡಿದ್ದು, ಸುದ್ದಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾ ಹೂಡಿದ್ದು, ಬಂದೋಬಸ್ತ್ಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದೆ.
ನಾಲ್ವರ ಬಂಧನ
ಮಂಗಳವಾರ ತಡರಾತ್ರಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರೆಹಮಾನ್, ಖಲೀಲ್, ಅಬ್ಬಾಸ್ ಹಾಗೂ ಬಶೀರ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದು, ಮತ್ತೊಂದು ಗುಂಪಿನ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ
