ಕೈಕಂಬ: ಮೇಯುತ್ತಿದ್ದ ದನವನ್ನು ಬೇರೆಡೆ ಕಟ್ಟಲು ಹಗ್ಗದಲ್ಲಿ ಹಿಡಿದುಕೊಂಡು ಹೋಗುವ ವೇಳೆ ದನ ತಪ್ಪಸಿ ಓಡಿದ ಪರಿಣಾಮ ಹಗ್ಗ ಹಿಡಿದುಕೊಂಡಿದ್ದ ಯುವತಿ ತೆರೆದ ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ತೆಂಕಮಿಜಾರು ಗ್ರಾಮದ ಕರಿಕುಮೇರು ಎಂಬಲ್ಲಿ ಭಾನಿವಾರ ನಡೆದಿದೆ. ವಿನ್ಸೆಂಟ್ ಮೆಂಡೋನ್ಸಾ ಎಂಬವರ ಪುತ್ರಿ ವಿನೋಲಾ ಮೆಂಡೋನ್ಸಾ(24)ಮೃತಪಟ್ಟವರು. ವಿನ್ಸೆಂಟ್ ಮೆಂಡೋನ್ಸಾ ಅವರು ಭಾನುವಾರ ಬೆಳಗ್ಗೆ ಚರ್ಚ್ ಹೋಗುವ ವೇಳೆ ವಿನೋಲಾ ಅವರಲ್ಲಿ ದನವನ್ನು ಬೇರೆಡೆ ಕಟ್ಟುವಂತೆ ಹೇಳಿದ್ದರು. ಅವರಂತೆ ವಿನೋಲಾ ಅವರು ದನವನ್ನು ಬೇರೆಡೆ ಕಟ್ಟುವ ಸಂದರ್ಭ ಈ ದುರಂತ ಸಂಭವಿಸಿದೆ. ಬಾವಿಗೆ ಬಿದ್ದ ವಿಷಯ ತಿಳಿದ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಮೃತದೇಹವನ್ನು ಮೇಲೆತ್ತಿದರು.
ಮೃತ ವಿನೋಲಾ ಅವರು ಕಂಪ್ಯೂಟರ್ ಡಿಪ್ಲೊಮ ಪದವೀಧರೆಯಾಗಿದ್ದು, ವಾಮಂಜೂರು ವಿದ್ಯಾಜ್ಯೋತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿದ್ದರು. ವಿದೇಶಕ್ಕೆ ಹೋಗುವ ಸಿದ್ಧತೆಯಲ್ಲಿದ್ದ ಅವರು ಕೆಲದಿನಗಳ ಹಿಂದೆಯಷ್ಟೆ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ವಿನೋಲಾ ಅವರ ತಾಯಿ ಕೂಡ ಐದು ವರ್ಷಗಳ ಹಿಂದೆ ಬಟ್ಟೆ ಒಗೆಯುವ ವೇಳೆ ಇದೇ ಪರಿಸರದಲ್ಲಿ ನೀರಿಗೆ ಬಿದ್ದು ಮೃತ ಪಟ್ಟಿದ್ದರು. ವಿನೋಲಾ ಅವರ ಅಂತ್ಯಸಂಸ್ಕಾರ ಸಂಜೆ ಮೂಡುಪೆರಾರ ಚರ್ಚ್ ನಲ್ಲಿ ಸೋಮವಾರ ನಡೆಯಿತು
