ಕಲ್ಲಡ್ಕ : ಭಾರತವನ್ನು ಜಗತ್ತಿನ ಸರ್ವಶ್ರೇಷ್ಟ ದೇಶವನ್ನಾಗಿ ಮಾಡುವುದಕ್ಕೋಸ್ಕರ ಶಿಕ್ಷಕರು ತಮ್ಮ ವ್ಯಕ್ತಿತ್ವನ್ನು ವಿಕಸನಗೊಳಿಸಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ವಿದ್ಯಾಭಾರತಿ ಕರ್ನಾ ಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಿ.ಆರ್ ಜಗದೀಶ ಹೇಳಿದರು.

ಅವರು ಮೇ .20ರಂದು ಶುಕ್ರವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ 10ದಿನಗಳ ವಿದ್ಯಾವಿಕಾಸ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ|| ಪ್ರಭಾಕರ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಗುವಿನಲ್ಲಿರುವ ಸುಪ್ತಪ್ರತಿಭೆಯನ್ನು ಪ್ರಜ್ವಲಿಸಿ ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿಸಬೇಕು. ವ್ಯಕ್ತಿ ನಿರ್ಮಣದ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಗೌರವ ಸಲ್ಲುತ್ತದೆ. ದೇಶ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ಶಿಕ್ಷಕರಿಗೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ವಿದ್ಯಾಭಾರತಿ ಪ್ರಾಂತ ಅಧ್ಯಕ್ಷ ಎಂ.ಜೆ ಸುಂದರರಾಮ್, ಪ್ರಾಂತ ಕಾರ್ಯದರ್ಶಿಗಳಾದ ಭೀಮರೆಡ್ಡಿ, ಶಿಶುಶಿಕ್ಷಣದ ಪ್ರಾಂತ ಪ್ರಮುಖರಾದ ಶ್ರೀಮತಿ ತಾರಾ ಉಪಸ್ಥಿತರಿದ್ದರು.
ವಿದ್ಯಾಭಾರತಿ ಪ್ರಾಂತ ಸಹಕಾರ್ಯದರ್ಶಿ ವಸಂತ ಮಾಧವ ಸ್ವಾಗತಿಸಿ ಶಿಬಿರಾಧಿಕಾರಿ ವೆಂಕಟರಮಣ ರಾವ್ ಕಡಬ ವರದಿ ವಾಚಿಸಿದರು. ಕರ್ನಾಟಕ ರಾಜ್ಯದ 14 ಜಿಲ್ಲೆಗಳಿಂದ 60 ಶಾಲೆಗಳ 204 ಶಿಬಿರಾರ್ಥಿ ಗಳು ಭಾಗವಹಿಸಿದ್ದರು.
