ಬಂಟ್ವಾಳ: ಮಂಗಳೂರಿನ ಜನತೆಗೆ ಕುಡಿಯು ನೀರಿನ ಸಮಸ್ಯೆ ತಲೆದೋರಿರುವ ಹಿನ್ನಲೆಯಲ್ಲಿ ನದಿಪಾತ್ರದಲ್ಲಿ ಕೃಷಿಗೆ ನೀರು ಬಳಸದಂತೆ ರೈತರನ್ನು ಮನವೊಲಿಸುವ ನಿಟ್ಟಿನಲ್ಲಿ ವಿಶೇಷ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಬಂಟ್ವಾಳದ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು.
ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಕಳೆದ ಮಂಗಳವಾರದಿಂದ ಎಲ್ಲಾ ಕೈಗಾರಿಕಾ ಸಂಸ್ಥೆಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಆದೇಶಿಸಲಾಗಿದೆ. ಅದರಂತೆ ಕುಡಿಯುವ ನೀರಿನ ಅವಶ್ಯಕತೆ ಹಿನ್ನಲೆಯಲ್ಲಿ ನದಿ ಪಾತ್ರದ ಕೃಷಿಕರು ನದಿ ನೀರನ್ನು ಕೃಷಿಗೆ ಬಳಸದೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗಲು ಸಹಕರಿಸಬೇಕು, ಏಕಾಏಕಿ ವಿದ್ಯುತ್ ಕಡಿತಗೊಳಿಸಿ ಪಂಪ್ಗಳನ್ನು ನಿಷ್ಕ್ರೀಯಗೊಳಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪಿಗೆ ನೀಡದೆ ರೈತರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ ಹಿನ್ನಲೆಯಲ್ಲಿ ಈ ಸಭೆ ಕರೆಯಾಗಿದೆ ಎಂದು ಮಾಹಿತಿ ನೀಡಿದರು.
ವಾರಕ್ಕೆ ಎರಡು ದಿನ ಕೃಷಿಗೆ ನೀರು:
ರೈತರೊಂದಿಗೆ ಸುಧೀರ್ಘ ಚರ್ಚೆ ನಡೆಸಿದ ಬಳಿಕ ರೈತರ ಅಹವಾಲುಗಳನ್ನು ಆಲಿಸಿ ವಾರದ ಎರಡು ದಿನಗಳಲ್ಲಿ( ಬುಧವಾರ, ಶನಿವಾರ) ಮಾತ್ರ ರೈತರಿಗೆ ವಿದ್ಯುತ್ ನೀಡಿ ಮಂಗಳೂರಿನ ನೀರು ಒದಗಿಸಲು ಸಹಕಾರ ನೀಡಲು ಸಭೆ ತೀರ್ಮಾನಿಸಿತು. ಉಳಿದ ಐದು ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಸರಬರಾಜು ಮಾಡಲು ರೈತರು ಒಪ್ಪಿಕೊಂಡರು.
ಜಿಲ್ಲಾ ಕೇಂದ್ರ ಮಂಗಳೂರಿಗೆ ನೀರಿನ ಸಮಸ್ಯೆಯಾದರೆ ಅದರ ಪರಿಣಾಮ ಜಿಲ್ಲೆಗೆ ತಟ್ಟಿತ್ತದೆ. ಈಗ ಎದುರಾಗಿರುವ ನೀರಿನ ಸಮಸ್ಯೆ ಎಲ್ಲರ ಸಮಸ್ಯೆ. ಈ ಸಮಸ್ಯೆ ಬಗೆಹರಿಸುವಲ್ಲಿ ನಮ್ಮ ಪಾಲು ಇದೆ ಎಂದು ಭಾವಿಸಿ ರೈತರು ಮಾನವೀಯತೆಯೊಂದಿಗೆ ಸಹಕಾರ ನಿಡಬೇಕು. ಇದು ರೈತರಿಗೆ ಹಾಕುವ ಬರೆಯಲ್ಲ, ಬರೆ ಹಾಕದಂತೆ ನಿಮ್ಮ ಜೊತೆ ನಾನಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ತಾಲೂಕಿನ ರೈತರಿಗೆ ಭರವಸೆ ನೀಡಿದರು.
ಮಂಗಳೂರಿಗೆ ನೀರಿನ ತೀವ್ರ ಸಮಸ್ಯೆ ಇದೆ. ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತಗೊಳಿಸಿ ವಾರದ ಐದು ದಿನ ಮಂಗಳೂರಿಗೆ ನೀರು ಕೊಡಿಸಲು ನೀವು ಸಹಕಾರ ನೀಡಿ ಎಂದು ಮೇಯರ್ ಹರಿನಾಥ್ ರೈತರಲ್ಲಿ ಮನವಿ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಡ್ಯಾಂ ಆದರೆ ಅಂತರ್ಜಲ ಹೆಚ್ಚುತ್ತದೆ. ಈ ಬಗ್ಗೆ ಸವರ್ೇಗೆ ಟೆಂಡರ್ ಆಗಿದ್ದು ಶೀಘ್ರ ಸರ್ವ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿ ತರಾಟೆಗೆ:
ಮಂಗಳೂರಿಗೆ ಕುಡಿಯುವ ನೀರು ಇಲ್ಲದೇ ಹೋದಾಗ ಇಲ್ಲಿ ಬಂದು ಸಭೆ ಮಾಡುತ್ತಿರಿ, ತುಂಬೆ ಹೊಸ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಸಭೆ ನಡೆಸಿ ಹೋದವರು ಈವರೆಗೆ ಬಂದಿಲ್ಲ. ಆ ಕೆಲಸವನ್ನು ಯಾರು ಮಾಡುತ್ತಾರೆ ಎಂದು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮನಪಾ ಅಧಿಕಾರಿಗಳನ್ನು ಈ ಸಂಧರ್ಭ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಕಳ್ಳಿಗೆ ಹಾಗೂ ತುಂಬೆ ಗ್ರಾಮಕ್ಕೆ ಇದೇ ವೆಂಟೆಡ್ ಡ್ಯಾಂನಿಂದ ನೀರು ಪೂರೈಕೆಗೆ ಆಗ್ರಹ ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೈ 2 ಎಂಜಿಡಿ ಘಟಕ ಜಿಲ್ಲಾ ಪಂಚಾಯಿತ್ಗೆ ಹಸ್ತಾಂತರ ಗೊಂಡ ಬಳಿಕ ಈ ಸಮಸ್ಯೆ ಪರಿಹಾರವಾಗುವುದು ಈ ನಿಟ್ಟಿನಲ್ಲಿ ಜಿಪಂ. ಮುಖ್ಯಕಾರ್ಯನಿರ್ವ ಹಣಾಧಿಕಾರಿ ಶ್ರೀವಿದ್ಯಾ ಮುತುವರ್ಜಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
