ಮೂಡುಬಿದಿರೆ: ನಾಡು-ನುಡಿಯ ಘನತೆಯನ್ನು ತನ್ನದೇ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೇ ಹೊಸತನಕ್ಕೆ ನಾಂದಿ ಹಾಡಿದ ಸಮ್ಮೇಳನ ಆಳ್ವಾಸ್ ನುಡಿಸಿರಿ. ಕನ್ನಡ ನಾಡಿನ ಹಿರಿಮೆಗೊಂದು ಹೆಮ್ಮೆಯನಿಸಿರುವ ಈ ಸಮ್ಮೇಳನದಲ್ಲಿ ಶ್ರೀಲಂಕಾದ ಜನಪದೀಯ ಮುಖವಾಡಗಳು ಕಾಣಿಸಿಕೊಳ್ಳುತ್ತಿದೆ.

ಕಳೆದ 11 ವರ್ಷಗಳಿಂದ ನೂರಾರು ಸಾಹಿತಿಗಳು, ವಿದ್ವಾಂಸರು, ನೂರಾರು ಕಲಾತಂಡಗಳು ಹಾಗೂ ಸಾವಿರಾರು ಕಲಾವಿದರಿಗೆ ವೇದಿಕೆಯಾಗಿರುವ ನುಡಿಸಿರಿಯು ಪ್ರತಿವರ್ಷ ಹೊಸತನದತ್ತ ತೆರೆದುಕೊಳ್ಳುತ್ತಿದೆ. ಸಮ್ಮೇಳನದ ನೆಪದಲ್ಲಿ ನಾಡಿನ ಅಳಿವಿನಂಚಿರುವ ಕಲೆಗಳನ್ನು ಮತ್ತೆ ಮುಖ್ಯವಾಹಿನಿಗೆ ತರುವಂತಹ ಪ್ರಯತ್ನವಾಗಳೂ ಆಗುತ್ತಿದೆ. ಅದರೊಂದಿಗೆ ಕರ್ನಾಟಕದ ಕಲೆಗಳಿಗೆ ಸಾಮತ್ಯೆಯಿರುವ ದೇಶದ ವಿವಿಧ ಕಲೆಗಳನ್ನೂ ಕನ್ನಡಿಗರ ಮುಂದೆ ಪ್ರದರ್ಶಿಸಲಾಗುತ್ತಿದೆ. ಈ ಬಾರಿ ಶ್ರೀಲಂಕಾದ ಕಲೆಗೊಂದು ಅವಕಾಶ ನೀಡಲಾಗಿದೆ.
ಜನಪದೀಯ ಮುಖವಾಡಗಳು:
ಕರಾವಳಿಯ ಭೂತರಾಧನೆಗೆ ಸಾಮತ್ಯೆಯಿರುವ ಶ್ರೀಲಂಕಾದ ಜನಪದೀಯ ಆರಾಧನೆಯ ಕಲೆ `ವೆಸ್ಮೋನ್ ನಟುಂ’ ಬಳಸಲಾಗುವ 20 ಮುಖವಾಡಗಳನ್ನು ಆಳ್ವಾಸ್ಗೆ ತರಲಾಗಿದೆ. ಈ ಕಲೆಯ 6 ವಿಧದ ಮುಖವಾಡಗಳು ನುಡಿಸಿರಿಯ ಮೆರವಣಿಗೆಯಲ್ಲಿ ಹಾಗೂ ಆಳ್ವಾಸ್ ಸಾಂಸ್ಕೃತಿ ತಂಡದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದೆ. ನಾಗರಾಕ್ಷ್(ನಾಗರಾಜ್), ಗುರುಳುರಾಕ್ಷ್(ಗರುಡ), ಗಿನಿರಾಕ್ಷ್(ಅಗ್ನಿ) ಮಯೂರ ರಾಕ್ಷ್( ನವಿಲು) ಹೆಸರಿನ ಮುಖವಾಡಗಳು ಆಳ್ವಾಸ್ ಸಂಸ್ಥೆಯ ಸಂಗ್ರಹಕಾಗಿಯೇ ತರಲಾಗಿದೆ.
ಸುಮಾರು 30 ಸಾವಿರ ರೂ. ಬೆಲೆಬಾಳುವ ಮುಖವಾಡವನ್ನು ಕೊಲಂಬೋದಿಂದ ತರಲಾಗಿದೆ. ಒಂದೇ ಮರವನ್ನು ಕೆತ್ತಿ ಒಂದು ಮುಖವಾಡವನ್ನು ತಯಾರಿಸುವುದು ಇದರ ವಿಶೇಷತೆಯಲ್ಲೊಂದಾಗಿದೆ. ಮುಖವಾಡದ ಆಕಾರ, ಅವುಗಳಿಗೆ ಹಚ್ಚಲಾದ ಬಣ್ಣಗಳು ರಾಜ್ಯದ ಮುಖವಾಡ, ಕೆಲೆಗಳಿಗೆ ಬಳಸುವ ಬಣ್ಣಗಳಿಗಿಂತ ಭಿನ್ನವಾಗಿದೆ.
ಕೊಲಂಬೋದ ಕಲಾವಿದ ಅರುಣ್ ರತ್ನ ಒಲೆಬೊಡುವೆ ನೇತೃತ್ವದ ಎನ್ಶಿಯೆಂಟ್ ಮಾಸ್ಕ್ ಮೇಕಾರ್ನ ವೃತ್ತಿಪರ ಕಲಾವಿದರು ಮುಖವಾಡವನ್ನು ತಯಾರಿಸಿದ್ದಾರೆ.
ಭಯ ತೊಲಗಿಸುವ ಕಲೆ:
`ವೆಸ್ಮೋನು ನಟುಂ’ ಧಾರ್ಮಿಕ ಆಚರಣೆಯೊಂದಿಗೆ ಪ್ರಸ್ತುತ ಪಡಿಸುವ ಶ್ರೀಲಂಕಾದ ಜನಪದೀಯ ಕಲೆ.
ಜನರಿಗೆ ಪ್ರಾಣಿ ಸಹಿತ ವಿವಿಧ ಜೀವಿಗಳನ್ನು ನೋಡುವಾಗ ಹೆದರಿಕೆಯಾಗುವುದು ಸಹಜವಾಗಿದ್ದು, ಭಯವನ್ನು ಈ ಕಲೆ ದೂರ ಮಾಡುತ್ತದೆ ಎಂಬ ನಂಬಿಕೆ ಅಲ್ಲಿನ ಜನರಲಿದೆ. ಪ್ರಾಣಿಗಳ ಮುಖವಾಡವಲ್ಲದೆ, ಜೋಕರ್, ಅಸಹ್ಯಕರವಾದ ಮನುಷ್ಯನ ಮುಖವಾಡಗಳನ್ನು ಕೂಡ ಈ ಕಲೆಯಲ್ಲಿ ಬಳಸಲಾಗುತ್ತದೆ.
ಆಳ್ವಾಸ್ನಲ್ಲಿ ಶ್ರೀಲಂಕಾ ಸಾಂಸ್ಕೃತಿಕ ವೈಭವ:
ಶಿಕ್ಷಣದೊಂದಿಗೆ ದೇಶಿಯ ಕಲೆಗಳ ತರಬೇತಿಯನ್ನು ನೀಡಿ, ಅವರನ್ನು ಪರಿಪೂರ್ಣ ಕಲಾವಿದರನ್ನಾಗಿಸುತ್ತಿರುವ ಸಂಸ್ಥೆ ಆಳ್ವಾಸ್. ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಶ್ರೀಲಂಕಾದಿಂದ ಬಂದಂತಹ ವಿದ್ಯಾರ್ಥಿಗಳು ಶಿಕ್ಷಣ ಪೂರೈಸುತ್ತಿದ್ದಾರೆ. ಇದರೊಂದಿಗೆ ಅವರದ್ದೇ ನೆಲದ ಕಲೆಯನ್ನು ದಶಕದಿಂದ ತರಬೇತು ನೀಡಿ, ಅಂತಾರಾಷ್ಟ್ರೀಯ ಕಲೆಯೊಂದನ್ನು ಮೂಡುಬಿದಿರೆ ಮಣ್ಣಿನಲ್ಲಿ ಪ್ರೋತ್ಸಾ ಹಿಸಲಾಗುತ್ತಿದೆ. 55ರಷ್ಟು ಶ್ರೀಲಂಕಾದ ವಿದ್ಯಾರ್ಥಿಗಳು, ತಮ್ಮ ನಾಡಿನ ಪ್ರಸಿದ್ಧ ಕ್ಯಾಂಡಿಯನ್ ನೃತ್ಯ ಸಹಿತ ಸಾಹಸ ಪ್ರದರ್ಶನ, ವಿವಿಧ ನೃತ್ಯ ಪ್ರಕಾರಗಳನ್ನು ಕಲಿತು, ವೃತ್ತಿಪರ ಕಲಾವಿದರಂತೆ ಪ್ರದರ್ಶಿಸುತ್ತಿದ್ದಾರೆ.



