ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕ ಭಾರ ಮತ್ತು ಅಕ್ರಮ ಮರಳು ಸಾಗಾಟದ ಹತ್ತು ಲಾರಿಗಳನ್ನು ಗು ರುವಾರ ಸಂಜೆ ವಶಕ್ಕೆ ಪಡೆದು ರೂ 50ಸಾವಿರ ಮೊತ್ತದ ದಂಡ ವಿಧಿಸಿದ ಘಟನೆ ನಡೆದಿದೆ.
ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್ ಅವರು ಗುರುವಾರ ಮಧ್ಯಾಹ್ನ ಬಿ.ಸಿ.ರೋಡ್ ತಾಲ್ಲೂಕು ಕಚೇರಿಗೆ ಆಗಮಿಸುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಭಾರೀ ಗಾತ್ರದ ಲಾರಿ ಮತ್ತು ಟಿಪ್ಪರ್ನಲ್ಲಿ ಅಕ್ರಮ ಮರಳು ಸಾಗಾಟ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಲಾರಿಗಳನ್ನು ತಪಾಸಣೆಗೊಳಿಸುವಂತೆ ಇಲ್ಲಿನ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಇದರಿಂದಾಗಿ ಇಂತಹ ಲಾರಿಗಳನ್ನು ತಡೆದು ತನಿಖೆ ನಡೆಸಿದ ವೇಳೆ ಪರವಾನಗಿ ರಹಿತ 5 ಲಾರಿಗಳಿಗೆ ತಲಾ ರೂ 10 ಸಾವಿರದಂತೆ ಒಟ್ಟು ರೂ 50 ಸಾವಿರ ದಂಡ ವಿಧಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಗಣಿ ಇಲಾಖೆ ಅಧಿಕಾರಿ ಪದ್ಮಶ್ರೀ, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಆಸಿಫ್ ಇಕ್ಬಾಲ್, ಗ್ರಾಮಕರಣಿಕರಾದ ನಾಗರಾಜ, ಯೋಗಾನಂದ, ಕುಮಾರ್, ಜನಾರ್ದನ, ಕ್ರೈಮ್ ಎಸೈ ಗಂಗಾಧರಪ್ಪ ಮತ್ತಿತರರು ಪಾಲ್ಗೊಂಡಿದ್ದರು.
