ಮಂಗಳೂರು: ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ಚಿತ್ರ `ಏರೆಗ್ಲಾ ಪನೊಡ್ಚಿ’ ನಾಳೆ (ನ.27) ಮಂಗಳೂರು, ಉಡುಪಿ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಬಾಡಿಗೆ ವಠಾರವೊಂದರಲ್ಲಿ ನಡೆಯುವ ನಿತ್ಯ ಘಟನಾವಳಿಗಳೇ ಚಿತ್ರದ ಪ್ರಧಾನ ವಸ್ತುವಾಗಿರಲಿದ್ದು, ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಜನಮೆಚ್ಚುಗೆ ಪಡೆದುಕೊಂಡಿದೆ.
ಕೋಡ್ಲು ಕ್ರಿಯೇಷನ್ಸ್ ಲಾಂಛನಡಿಯಲ್ಲಿ ತಯಾರಾಗಿರುವ ಚಿತ್ರದ ಕಥೆ ಬನಶಂಕರಿ ಅವರದ್ದಾಗಿದ್ದು, ಚಿತ್ರಕಥೆ-ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಕೋಡ್ಲು ರಾಮಕೃಷ್ಣ ಅವರೇ ವಹಿಸಿಕೊಂಡಿದ್ದಾರೆ. ಸಚಿನ್ ಶೆಟ್ಟಿ ಕುಂಬ್ಳೆ ಸಹನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವನ್ನು ಎಸ್.ಕೆ.ಶೆಟ್ಟಿ ಹಾಗೂ ಬಿ.ಎಲ್.ಮುರಳಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗಿರಿಧರ ದಿವಾಣ ಸಂಗೀತ ಸಂಯೋಜಿಸಿದ್ದು, ಡಾ/ಉಮೇಶ್ ಭಟ್ ಸಾಹಿತ್ಯಕ್ಕೆ ಹೆಸರಾಂತ ಗಾಯಕರಾದ ಅನುರಾಧ ಭಟ್, ನಕುಲ್ ಅಭ್ಯಂಕರ್, ಸುಪ್ರಿಯಾ ಲೋಹಿತ್ ಹಾಗೂ ಶಿಲ್ಪಾ ಧ್ವನಿ ನೀಡಿದ್ದಾರೆ.
ಚಿತ್ರಕ್ಕೆ ಬಸವರಾಜ ಅರಸ್ ಸಂಕಲನಕಾರರಾಗಿ ದುಡಿದಿದ್ದರೆ, ಶಶಿಧರ ಶೆಟ್ಟರ್ ಛಾಯಾಗ್ರಹಣ ಮಾಡಿದ್ದಾರೆ. ತಮ್ಮ ಲಕ್ಷ್ಮಣ್ ಕಲಾನಿರ್ದೇಶನ ಇರಲಿದೆ. ಕನ್ನಡ ಚಿತ್ರರಂಗ ಹಾಗೂ ತುಳುನಾಡಿನ ಖ್ಯಾತ ಕಲಾವಿದರು ಚಿತ್ರಕ್ಕೆ ಬಣ್ಣಹಚ್ಚಿದ್ದು, ಶಿವಧ್ವಜ್, ನೀತೂ, ಸಂದೀಪ್ ಶೆಟ್ಟಿ, ರಕ್ಷಾ ಶೆಣೈ, ಇಳಾ ವಿಟ್ಲ, `ಬಿಗ್ ಬಾಸ್’ ಖ್ಯಾತಿಯ ಅನಿತಾ ಭಟ್, ರೂಪಶ್ರೀ ವರ್ಕಾಡಿ, ಶೋಭಾ ರೈ, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ, ಅರವಿಂದ್ ಬೋಳಾರ್, ಶಶಿಧರ ಬೆಳ್ಳಾಯರು, ರವಿ ಸುರತ್ಕಲ್, ತಮ್ಮ ಲಕ್ಷ್ಮಣ ತಾರಾಗಣದಲ್ಲಿ ಚಿತ್ರ ಸೊಗಸಾಗಿ ಮೂಡಿಬಂದಿದೆ.
ತುಳುನಾಡಿನ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನದ ಸೊಗಡು ಚಿತ್ರದಲ್ಲಿ ಸೊಗಸಾಗಿ ಮೂಡಿಬಂದಿದ್ದು, ಮಂಗಳೂರು, ಸುರತ್ಕಲ್ ಬೀಚ್ ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಮಂಗಳೂರಿನ ರಾಮಕಾಂತಿ ಚಿತ್ರಮಂದಿರ, ಪಿವಿಆರ್, ಸಿನಿಪೊಲಿಸ್, ಬಿಗ್ ಸಿನೆಮಾಸ್, ಬಿಸಿ ರೋಡ್ ನಕ್ಷತ್ರ, ಭಾರತ್ ಬೆಳ್ತಂಗಡಿ, ನಟರಾಜ್ ಸುರತ್ಕಲ್ ಹಾಗೂ ಉಡುಪಿ ಜಿಲ್ಲೆಯ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಲಿದೆ.




