ಭಕ್ತಿ ಶರಣಾಗತಿಯಲ್ಲ : ಡಾ.ಎಂ.ಮೋಹನ ಆಳ್ವಮೂಡುಬಿದಿರೆ :
ಭಕ್ತಿ ಶರಣಾಗತಿಯಲ್ಲ. ಅದು ಭಕ್ತ ಮತ್ತು ದೈವತ್ವದ ನಡುವಿನ ಸಮನ್ವಯದ ಮೂಲಕ ಸಾಮರಸ್ಯದ ವಿಚಾರವನ್ನು ತಿಳಿಸಿ ಕೊಡುವಂತದ್ದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಇವುಗಳ ಆಶ್ರಯದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಕಾರದೊಂದಿಗೆ ಕನಕದಾಸರ ಕುರಿತಾದ ಸಾಮಾಜಿಕ- ಸಾಂಸ್ಕøತಿಕ-ಪಾರಮಾರ್ಥಿಕ-ಜೀವನದರ್ಶನ ಸಂವಾದ ಕಾರ್ಯಕ್ರಮ ಕನಕ ಸಂಸ್ಕøತಿ ಕಮ್ಮಟವನ್ನು ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಸತ್ಯ ಮತ್ತು ಸುಳ್ಳು ಕಾಲಬದ್ಧವಾಗಿರಲಿ ಎಂದು ಕೊಂಡವರು ಅವರೆಂದೂ ಒಣ ತತ್ವದ ಬಗ್ಗೆ ಮಾತನಾಡಿದವರಲ್ಲ. ಭಕ್ತಿ ಎಂದರೆ ತೀರ್ಥಸ್ಥಾನದಿಂದ ಪಾವನವಾಗುವುದಲ್ಲ. ಕೀರ್ತನೆಗಳಲ್ಲಿ ಹುಡುಕುವುದಲ್ಲ ಬದಲಾಗಿ ಸತ್ಯವಂತರ ಸಂಗದಲ್ಲಿ ಭಕ್ತಿ ಇದೆ ಎಂದು ಪ್ರತಿಪಾದಿಸಿದ್ದರು ಎಂದು ಹೇಳಿದರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ ಚಿಕ್ಕಣ್ಣ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬೀದರ್ನಿಂದ ಕಾಸರಗೋಡಿನ ವರೆಗೆ ಕನಕದಾಸರ ಬಗ್ಗೆ ಸುಮಾರು ನೂರು ಕಾರ್ಯಕ್ರಮಗಳನ್ನು ಮಾಡಿದೆ. ಕನಕದಾಸರು ಜೀವನದಲ್ಲಿ ಹಲವು ನೋವುಗಳನ್ನು ಮತ್ತು ಅಘಾತಕಾರಿ ವಿಷಯಗಳನ್ನು ಅನುಭವಿಸಿದ್ದಾರೆ. ಇದರಿಂದಾಗಿ ಅವರು ಕೀರ್ತನೆಗಳನ್ನು ಬರೆಯಲು ಆರಂಭಿಸಿದರು ಎಂದು ಹೇಳಿದ ಅವರು ಈ ಕಾರ್ಯಕ್ರಮವನ್ನು ಆಯೋಜಿಸಲು ಸರಕಾರವು ಅನುದಾನವನ್ನು ಮಂಜೂರಾತಿ ಮಾಡುತ್ತಿದೆ ಹಾಗೂ ಸ್ವತಂತ್ರವಾಗಿ ಕಾರ್ಯಕ್ರಮವನ್ನು ಮಾಡಲು ಸಹಕರಿಸುತ್ತಿದೆ ಎಂದು ಹೇಳಿದರು.
ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಚಂದ್ರಶೇಖರ ಗೌಡ ಸ್ವಾಗತಿಸಿದರು. ಡಾ.ಪೂವಪ್ಪ ಕಣಿಯೂರು, ಡಾ.ಅರುಣ್ ಕುಮಾರ್ ಎಸ್.ಆರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂವಾದವನ್ನು ನಡೆಸಿಕೊಟ್ಟರು. ಉಪನ್ಯಾಸಕ ಪ್ರವೀಣ್ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ವಂದಿಸಿದರು.
ನಂತರ ಅಷ್ಟಾವಧಾನಿ ಉಮೇಶ್ ಗೌತಮ್ ನಾಯಕ್ ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ಕಾವ್ಯ ಗಾಯನ ನಡೆಯಿತು.

