ಬಜ್ಪೆ: ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯಕ್ಕೆಂದು ಹೋದಾಗ ಸ್ಥಳೀಯ ಮಹಿಳೆಯೊಬ್ಬರು ಕತ್ತಿಯಿಂದ ಗಾಯಗೊಳಿಸಿದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕೊಂಪದವು ಎಂಬಲ್ಲಿ ನಡೆದಿದೆ.
ಕೊಂಪಪದವು ನಿವಾಸಿ ಕೃಷ್ಣ ಅಮೀನ್ ಅವರು ಬಜ್ಪೆ ಠಾಣೆಗೆ ಕೆಲವರು ತನ್ನನ್ನು ತನ್ನ ಜಮೀನಿಗೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ತಿಳಿಸಿದ್ದರು. ಇದರ ಕರ್ತವ್ಯಕ್ಕೆಂದು ಠಾಣಾ ಪ್ರಭಾರರಾದ ಧನರಾಜ್ ಎಂಬವರು ಕೃಷ್ಣ ಅವರ ಜೊತೆ ಕೊಂಪದವಿನ ಪೂಮಾವರಕೋಡಿ ಎಂಬಲ್ಲಿಗೆ ಹೋದಾಗ ಆರೋಪಿಗಳಾದ ಅಪ್ಪಿ,ಬಾಬುಗೌಡ, ರಾಮ, ಉಮಾವತಿ, ನಾಗಮ್ಮ, ಹಾಗೂ ಲಲಿತಾ ಎಂಬವರು ರಸ್ತೆಯಲ್ಲಿ ಅಡ್ಡವಾಗಿ ಕುಳಿತುಕೊಂಡು ಕೈಯಲ್ಲಿ ಮರದ ಸೊಂಟೆಗಳನ್ನು ಹಿಡದುಕೊಂಡು ಬೆದರಿಸಿದ್ದಾರೆ.
ಈ ಪೈಕಿ ಅಪ್ಪಿ ಹಾಗೂ ಬಾಬು ಗೌಡ ಎಂಬಿಬ್ಬರು ತಮ್ಮ ಬಳಿ ಕತ್ತಿ ಇದೆ ಎಂದು ತಿಳಿಸಿದಾಗ ಧನ್ರಾಜ್ ಅವರು ತಾವು ಅರ್ಜಿ ವಿಚಾರಣೆಗೆ ಬಂದಿದ್ದಾಗಿ ತಿಳಿಸಿದ್ದಾರೆ. ಇದನ್ನು ಕೇಳದ ಅಪ್ಪಿ ಅವರಿಗೆ ಕತ್ತಿಯಿಂದ ಎಡಗೈಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಧನರಾಜ್ ಅವರು ಬಜ್ಪೆ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
