ಅರ್ಕುಳ ಗ್ರಾಮದ ನಿತ್ಯಸಹಾಯ ಮಾತಾ ಹೈಸ್ಕೂಲಿನ ಹಿಂಭಾಗದಿಂದ, ಬಂಟ್ವಾಳ ತಾಲೂಕು ಮೇರಮಜಲು ಗ್ರಾಮಕ್ಕೆ ಹಾದು ಹೋಗುವ ಸಂಪರ್ಕ ರಸ್ತೆಯು 30 ವರ್ಷದಿಂದ ಇದೆ. ಈ ಪರಿಸರದಲ್ಲಿ ಸುಮಾರು 40-50 ಕುಟುಂಬಗಳು ವಾಸಿಸುತ್ತವೆ. ಈ ರಸ್ತೆಯನ್ನು ಸರಿಪಡಿಸಬೇಕೆಂದು ಆ ಕ್ಷೇತ್ರದ ಅಂದರೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಮಾನ್ಯ ಮೊದಿನ್ ಭಾವ ಇವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು.


2015, ಫೆಬ್ರವರಿ 22 ರಂದು ಈ ಪರಿಸರದ 7-8 ಮಂದಿಯ ನಿಯೋಗವು ಅವರನ್ನು ಮುಖಾತ: ಭೇಟಿಯಾಗಿ ಈ ಬಗ್ಗೆ ಮನವಿಯನ್ನು ಮಾಡಿತ್ತು. ಶಾಸಕರು ಮುಂದಿನ ಒಂದು ವಾರದೊಳಗೆ ಕಾಮಗಾರಿ ಆರಂಭಿಸುತ್ತೇನೆ ಎಂದು ಭರವಸೆಯನ್ನು ನೀಡಿದ್ದರು ಮತ್ತು ಕಂಟ್ರಾಕ್ಟರ್ಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿಯನ್ನು ಕೈಗೊಳ್ಳಲು ತಿಳಿಸಿದ್ದರು. ಇದಾದ ಸುಮಾರು ಒಂದು ತಿಂಗಳ ನಂತರ ಸುಮಾರು 150 ಮೀಟರ್ ಮಾರ್ಗವನ್ನು ಸಮತಟ್ಟು ಮಾಡಿ ಮಣ್ಣು ಹಾಕಲಾಗಿತ್ತು. ಹಾಕಿರುವ ಮಣ್ಣು ಈಗ ಕೆಸರಿನ ಕೊಚ್ಚೆಯಂತಾಗಿದೆ.
ಈಗ ಈ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ನಡೆದಾಡಲು ಕಷ್ಟಕರವಾದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕರಿಗೆ ತಿಳಿಸಿದಾಗ ಅವರು ಏನೂ ಸ್ಪಂದನೆ ಕೊಡದೆ ಇರುವುದರಿಂದ ಈ ಪರಿಸರದ ಜನರಿಗೆ ತೀರಾ ಸಮಸ್ಯೆಯಾಗಿರುತ್ತದೆ. ಬೇರೆ ಪರ್ಯಾಯ ರಸ್ತೆ ಇಲ್ಲದಿರುವುದರಿಂದ ಹಾಗೂ ತುರ್ತು ಸಂದರ್ಭಗಳಲ್ಲಿ ಇದೇ ರಸ್ತೆಯನ್ನು ಗ್ರಾಮಸ್ಥರು ಅವಲಂಬಿಸಿರುವುದರಿಂದ ತೀರಾ ಕಷ್ಟವಾಗಿರುತ್ತದೆ. ಈ ರಸ್ತೆಯ ಮೂಲಕ ಶಾಲಾ ಮಕ್ಕಳು ಹಾಗೂ ವೃದ್ದರು ತುಂಬಾ ಕಷ್ಟದಿಂದ ನಡೆದುಕೊಂಡು ಹೋಗುತ್ತಿದ್ದಾರೆ.
ಪ್ರಸ್ತುತ ಈ ರಸ್ತೆಯ ಮೂಲಕ ನಡೆದಾಡಲು ಹಾಗೂ ಯಾವುದೇ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳಿಗೆ ಸಂಚರಿಸಲು ಅಸಾಧ್ಯವಾಗಿದೆ. ಈ ಸಮಸ್ಯೆಯ ಬಗ್ಗೆ ಅಡ್ಯಾರು ಪಂಚಾಯತ್ಗೂ ಮಾಹಿತಿಯನ್ನು ನೀಡಲಾಗಿದೆ. ಪಂಚಾಯತ್ ಅಧ್ಯಕ್ಷರು ಕೂಡಾ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರೂ ಕೂಡಾ ಭೇಟಿ ನೀಡಿದ್ದಾರೆ.

