ಗುರುಪುರ : ಗುರುಪುುರ ಬಂಟರ ಮಾತೃ ಸಂಘ (ರಿ.) ಇದರ ವತಿಯಿಂದ ಕಳೆದ ಭಾನುವಾರ ಗುರುಪುರ ವೈದ್ಯನಾಥ ಸಮುದಾಯ ಭವನದಲ್ಲಿ ಬಂಟರ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡಿದರು. ಬಂಟರು ಜಾತೀಯ ಸಂಘಟನೆಯಲ್ಲದೆ ರಾಜ್ಯ ಮತ್ತು ದೇಶದ ರಾಜಕೀಯ, ಆಡಳಿತ ಮಟ್ಟದಲ್ಲಿ ಬೆಳೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಂಟರು ತಮ್ಮ ಮಕ್ಕಳಿಗೆ ಐಎಎಸ್, ಐಪಿಎಸ್ ನಂತಹ ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡಿ, ಈ ಕ್ಷೇತ್ರದಲ್ಲಿ ಬಂಟರ ಪ್ರಾತಿನಿಧ್ಯ ಕೊರತೆ ನೀಗಿಸುವುದು ಅವಶ್ಯವೆಂದು ಸ್ವಾಮಿ ಅಭಿಪ್ರಾಯ ವ್ಪಕ್ತಪಟ್ಟರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಮೊಹಿದಿನ್ ಬಾವ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಟರ ಸಂಘಟನಾ ಚಾತುರ್ಯ ಕೊಂಡಾಡಿದ್ದಲ್ಲದೆ, ರಾಜಕಾರಣಿಯಾಗಿ ನನ್ನ ಸೇವೆ ಎಲ್ಲ ವರ್ಗಗಳಿಗೂ ಸಮಾನವಾಗಿ ಸಲ್ಲುತ್ತದೆ. ವರ್ಗ ಸಂಘರ್ಷ ಬೇಡ, ಶಾಂತಿ-ಸಹಬಾಳ್ವೆ ಅವಶ್ಯ. ಸಂಘ ಸಂಪರ್ಕಿಸಿದಲ್ಲಿ ವ್ಯವಸ್ಥೆಯಡಿ ಯಾವುದೇ ನೆರವಿಗೂ ಸದಾ ಸಿದ್ಧನಿದ್ದೇನೆಂದು ಭರವಸೆ ನೀಡಿದರು.
ಉನ್ನತ ವ್ಯಾಸಂಗದೊಂದಿಗೆ ಮಕ್ಕಳಿಗೆ ಸಂಸ್ಕಾರ ಸಿಕ್ಕಾಗ ಮಾತ್ರ ವಿದ್ಯೆಗೆ ನಿಜವಾದ ಬೆಲೆ ಬರುತ್ತದೆ. ಸಂಸ್ಕಾರವಂತರಿಂದಲೇ ಇಂತಹ ಸಾಮಾಜಿಕ ಕಾರ್ಯ ಸಾಧ್ಯ ಎಂದು ಪರಮಾನಂದ ಸಾಲ್ಯಾನ್ ಸುರತ್ಕಲ್ ಹೇಳಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಬಂಟ ಸಮಾಜದ ಅಭ್ಯರ್ಥಿಗಳಾದ ಸದಾಶಿವ ಶೆಟ್ಟಿ ಕಲ್ಲಕಲ್ಲಂಬಿ (ಗುರುಪುರ ಗ್ರಾ.ಪಂ), ನಳಿನಿ ಶೆಟ್ಟಿ (ಗುರುಪುರ), ಹರಿಪ್ರಸಾದ್ ಆಳ್ವ (ಮೂಡುಶೆಡ್ಡೆ ಗ್ರಾ.ಪಂ ಅಧ್ಯಕ್ಷ), ವಿಶ್ವನಾಥ ಶೆಟ್ಟಿ (ಉಳಾಯಿಬೆಟ್ಟು), ದೇವಕಿ ಬಳ್ಳಾಲ್ (ಗಂಜಿಮಠ) ಹಾಗೂ ಗುರುಪುರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಶೆಟ್ಟಿ ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಜೊತೆಗೆ ಬೆಂಗಳೂರು ಬಂಟರ ಸಂಘದ ವತಿಯಿಂದ ಇಲ್ಲಿನ ಐದು ಮಂದಿ ಬಂಟ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಲಿಂಗುಮಾರು ಶಿವಣ್ಣ ಶೆಟ್ಟಿ, ಉಮೇಶ್ ಮುಂಡ (ಸಂಘದ ಅಧ್ಯಕ್ಷ), ವಿಜಯಲಕ್ಷ್ಮೀ ಶೆಟ್ಟಿ ಮೊಗರು, ಪದಾಧಿಕಾರಿಗಳಾದ ಸುದರ್ಶನ ಶೆಟ್ಟಿ ಪೆರ್ಮಂಕಿ, ಪುರುಷೋತ್ತಮ ಮಲ್ಲಿ, ಸತ್ಯಾನಂದ ಶೆಟ್ಟಿ, ಬಂಟರ ಸಂಘದ ಪ್ರತಿನಿಧಿ ಉಮೇಶ್ ರೈ ಪದವುಮೇಗಿನಮನೆ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು.



